Friday 26th, April 2024
canara news

ಚಿತ್ರೀಕರಣ ಮುಗಿಸಿದ ಬಹುನಿರೀಕ್ಷಿತ "ಮಾರ್ಚ್-22" ಸಿನೆಮಾ; ಹಾಡಿನಲ್ಲಿ ಕಾಣಿಸಿಕೊಂಡ ಡಾ. ಬಿ.ಆರ್ ಶೆಟ್ಟಿ: ಸಿನೆಮಾ ಬಗ್ಗೆ ಯಾರು ಏನು ಹೇಳಿದ್ದಾರೆ ನೋಡಿ....

Published On : 11 Apr 2017   |  Reported By : media release


ಬೆಂಗಳೂರು: ಜೀವಜಲದ ಮಹತ್ವ ಮತ್ತು ಜಾಗೃತಿಗಾಗಿ ಸಂದೇಶ ಸಾರುವ "ಮಾರ್ಚ್-22" ಚಿತ್ರ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಇದು ಅವರಿಗೆ ಮೊದಲ ನಿರ್ಮಾಣದ ಚಿತ್ರ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನುಳಿದಂತೆ ಅನಂತ್‍ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ರಮೇಶ್ ಭಟ್, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಜೈಜಗದೀಶ್, ವಿನಯಾ ಪ್ರಸಾದ್, ಪದ್ಮಜಾ ರಾವ್ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ.

ಅವರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮದೊಂದಿಗೆ ಮುಖಾಮುಖಿಯಾಗಿತ್ತು. ತಮ್ಮ ಅನುಭವ ಹಾಗು ಸಿನೆಮಾದ ಬಗ್ಗೆ ಮೆಚ್ಚುಗೆಯನ್ನು ಅವರು ಮಾಧ್ಯಮದವರ ಮುಂದಿಟ್ಟರು.

ಮೊದಲು ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾತನಾಡಿ, ಇದು ನನ್ನ 26 ನೇ ಚಿತ್ರ. ಈ ಚಿತ್ರಕ್ಕೆ ಮೊದಲು ಅನಂತ್‍ನಾಗ್ ಮತ್ತು ಲಕ್ಷ್ಮಿ ಜೋಡಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದೆ. ಆದರೆ ಕಾರಣಾಂತರದಿಂದ ಲಕ್ಷ್ಮಿ ನಟಿಸಲು ಸಾಧ್ಯವಾಗಲಿಲ್ಲ. ಆ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿ ಗೀತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮಿ ಅವರು ಅನಂತ್‍ನಾಗ್ ಜೊತೆ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರ ಸಂಪೂರ್ಣಗೊಂಡಿದೆ. ನೀರಿನ ಮಹತ್ವದ ಕುರಿತು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಚಿತ್ರ ನಿರ್ಮಿಸಿದ್ದೇನೆ: ಹರೀಶ್ ಶೇರಿಗಾರ್

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹರೀಶ್ ಶೇರಿಗಾರ್ ನಿರ್ಮಾಪಕರಾಗಿದ್ದು, ಓರ್ವ ಗಾಯಕರಾಗಿದ್ದಾರೆ. ಅವರು ತಮ್ಮ ಮನದಾಳದ ಮಾತನ್ನು ಮಾಧ್ಯಮದವರ ಮುಂದಿಟ್ಟರು.ಚಿತ್ರ ನಿರ್ಮಾಣ ಮಾಡಿರುವುದು ಆಕಸ್ಮಿಕ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಸಮಾಜಕ್ಕೊಂದು ಸಂದೇಶ ನೀಡುವ ಉದ್ದೇಶದಿಂದ ಚಿತ್ರ ಮಾಡಲಾಗಿದೆ. ಮಾರ್ಚ್-22 ವಿಶ್ವ ಜಲದಿನ. ನೀರಿನ ಬಗೆಗಿನ ಸಿನಿಮಾ ಆಗಿರುವುದರಿಂದ ಚಿತ್ರಕ್ಕೆ ಮಾರ್ಚ್-22 ಎಂದು ಹೆಸರಿಡಲಾಗಿದೆ. ಜಾತಿ ಮತ ಎಂದು ಏನೇನೋ ಕಟ್ಟುಪಾಡುಗಳನ್ನು ಮಾಡಿಕೊಂಡಿದ್ದೇವೆ. ಮನೆಯಿಂದ ಹೊರಗಡೆ ನಾವೆಲ್ಲಾ ಒಂದೇ. ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ಗಂಟೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಿ.ಆರ್ ಶೆಟ್ಟಿ

ಸುದ್ದಿಗೋಷ್ಠಿಯಲ್ಲಿ "ಮಾರ್ಚ್-22" ಶೀರ್ಷಿಕೆಯ ಪೆನ್ ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಮಿ ಬಿ.ಆರ್ ಶೆಟ್ಟಿ, ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ಗಂಟೆ ಚಿತ್ರೀಕರಣ ಮಾಡಿದ್ದೇನೆ. ನಿಜಕ್ಕೂ ಸವಾಲಿನ ಕೆಲಸ. ಕಲಾವಿದರ ಶ್ರಮಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.

ಮಾಧ್ಯಮದವರೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡ ಬಿ.ಆರ್. ಶೆಟ್ಟಿ, ಅದು 1973ರ ಸಮಯ. ಸಾಲ ಮಾಡಿ ಮನೆ ಕಟ್ಟಿದ್ದೆ. ಸಾಲ ತೀರಿಸುವ ಉದ್ದೇಶದಿಂದ ಮರುಭೂಮಿ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್‍ಗೆ ಬಂದೆ ಎಂದು ತಮ್ಮ ಯಶೋಗಾಥೆಯನ್ನು ವಿವರಿಸಿದರು.

ಈ ಚಿತ್ರದ ವಿಷಯವಸ್ತು ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ. ನೀರು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ನೀರಿನ ಸಂರಕ್ಷಣೆ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದರು.

ಹಿರಿಯ ನಟ ರಮೇಶ್ ಭಟ್ ಅವರಿಗೆ ಈ ಚಿತ್ರ 500ನೇ ಚಿತ್ರ. ಮಹತ್ವದ ಸಂದೇಶ ಸಾರುವ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎಂದರೆ ಶರತ್ ಲೋಹಿತಾಶ್ವ, ಪುಡಾರಿಯ ಪಾತ್ರ, ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು ಎಂದು ವಿವರ ನೀಡಿದರು.

ಪದ್ಮಜಾ ರಾವ್, ಚಿತ್ರದ ಪ್ರತಿಯೊಬ್ಬರೂ ಒಂದೊಂದು ಪತ್ರಿಕಾಗೋಷ್ಠಿ ನಡೆಸಬೇಕು ಅಷ್ಟರ ಮಟ್ಟಿಗೆ ವಿಷಯ ಇದೆ ಎಂದರು.

ನಟ ಆರ್ಯವರ್ಧನ್, ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿರುವುದರಿಂದ ಕಿರಿಯರಿಗೆಲ್ಲಾ ಸ್ಫೂರ್ತಿ ಬಂದಿದೆ. ಇದು ನಮಗೆ ಪಾಠಶಾಲೆ ಇದ್ದಂತೆ ಎಂದು ಹೇಳಿಕೊಂಡರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here