ಮಂಗಳೂರು: ರಾಜ್ಯ ಸಭೆಯಲ್ಲಿ ಕರ್ನಾಟಕದ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಖಾಸಗಿ ಸದಸ್ಯರ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ ಆಸ್ಕರ್ ಫೆರ್ನಾಂಡಿಸ್ ಪೂರ್ವಸಿದ್ಧತೆಯಿಲ್ಲದೆಯೇ ತುಳುವಿನ ಹಾಡೊಂದನ್ನು ಹಾಡಿ ಎಲ್ಲರ ಗಮನ ಸೆಳೆದರು.
ತಮ್ಮ ಸಹಪಾಠಿ ಸಂಸದ ಮತ್ತು ಕನ್ನಡಿಗ ಜೈರಾಂ ರಮೇಶ್ ಅವರು ತಮ್ಮನ್ನು ತುಳುವಿನಲ್ಲೇ ಮಾತನಾಡುವಂತೆ ಪ್ರಚೋದಿಸಿದ್ದರು. ಆದರೆ ಮಾತನಾಡುವ ಬದಲಾಗಿ ಹಾಡನ್ನು ಹಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು.
ಕರ್ನಾಟಕದ ಉಡುಪಿ ಮೂಲದವರಾದ ಫೆರ್ನಾಂಡಿಸ್ ಈ ತುಳು ಹಾಡನ್ನು ತಮ್ಮ ಬಾಲ್ಯದಲ್ಲಿ ಹಾಡುತ್ತಿದ್ದುದನ್ನೂ ನೆನಪಿಸಿಕೊಂಡರು. ಈ ಹಾಡನ್ನು ಎಮ್ಮೆಗಳನ್ನು ಪಳಗಿಸಲು ಹಾಡಲಾಗುತ್ತಿತ್ತು ಎಂದು ವಿವರಿಸಿದ ಆಸ್ಕರ್ ಹಾಡಲು ಶುರುವಿಟ್ಟುಕೊಂಡರು.
ಹಾಡುತ್ತಾ ಆಸ್ಕರ್ ನೀಡುತ್ತಿದ್ದ ಹಾವ-ಭಾವ ಜೈರಾಂ ರಮೇಶ್ ಮಾತ್ರವಲ್ಲ ಇತರ ಸಂಸದರ ಮೆಚ್ಚಿಗೆಗೂ ಪಾತ್ರವಾಯಿತು. ಆ ಸಂದರ್ಭದಲ್ಲಿ ಸಭಾಧ್ಯಕ್ಷರಾಗಿದ್ದ ಸುಖೇಂದು ಶೇಖರ್ ರಾಯ್ ಹಾಡಿಗೆ ಪ್ರಶಂಸೆ ಸೂಚಿಸಿದರು.