ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದ ಶಂಕಿತ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಮೂವರು ದೋಷಿಗಳು ಎಂದು ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ 7 ಜನರಲ್ಲಿ 4 ಜನರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ನ್ಯಾಯಾಧೀಶೆ ಪುಷ್ಪಾಂಜಲಿ ಅವರು, ಅಹ್ಮದ್ ಬಾವ, ನೌಶಾದ್ ಹಾಗೂ ಫಕೀರ್ ಎಂಬುವವರನ್ನ ಅಪರಾಧಿಗಳೆಂದು ಘೋಷಿಸಿದರು. ಇನ್ನು ಮುಹಮ್ಮದ್ ಅಲಿ, ಅವರ ಪುತ್ರ ಜಾವೆದ್ ಅಲಿ, ಶಬೀರ್ ಹಾಗೂ ರಫೀಕ್ ಪ್ರಕರಣದಲ್ಲಿ ದೋಷ ಮುಕ್ತರಾಗಿದ್ದಾರೆ.ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ 2008ರಲ್ಲಿ ಈ 7 ಜನರನ್ನು ಮಂಗಳೂರಿನ ವಿವಿಧೆಡೆ ಬಂಧಿಸಲಾಗಿತ್ತು. ಬಂಧಿತರ ವಿರುದ್ಧ ದೇಶದ್ರೋಹದ ಪಿತೂರಿ, ವಿಧ್ವಂಸಕ ಕೃತ್ಯಕ್ಕೆ ಸಂಚು ಮತ್ತಿತರ ಕೇಸನ್ನು ದಾಖಲಿಸಲಾಗಿತ್ತು.ಸೋಮವಾರ ಕೋರ್ಟ್ ತೀರ್ಪು ನೀಡಿದ್ದು ತಪ್ಪಿತಸ್ಥ ಉಗ್ರರಿಗೆ ಶಿಕ್ಷೆ ಪ್ರಮಾಣವನ್ನು ಎಪ್ರಿಲ್ 12ರಂದು ಘೋಷಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 62 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ