ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಸದ್ಯ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಸೋಮವಾರ ಎಸೆಸೆಲ್ಸಿ ತೃತೀಯ ಐಚ್ಛಿಕ ಭಾಷಾ ವಿಭಾಗದ ಪರೀಕ್ಷೆ ನಡೆಯಿತು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 13 ಶಾಲೆಗಳಲ್ಲಿ 313 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದರು.
2010-11 ನೇ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿಯಿಂದ ತೃತೀಯ ಭಾಷೆಯಾಗಿ ತುಳು ಕಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದಾದ ನಂತರ ತುಳು ಪರೀಕ್ಷೆ ಬರೆಯುತ್ತಿರುವ ಮೂರನೇ ಬ್ಯಾಚ್ ಇದಾಗಿದೆ. ಮೊದಲ ಹಾಗೂ ಎರಡನೇ ಬ್ಯಾಚ್ ನಲ್ಲಿ ಪರೀಕ್ಷೆ ಬರೆದ್ದಕ್ಕಿಂತ ಈ ಸಲ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.2015 ರಲ್ಲಿ ನಡೆದ ಎಸೆಸೆಲ್ಸಿ ತುಳು ಪರೀಕ್ಷೆಯಲ್ಲಿ ಕೇವಲ ಮಂಗಳೂರಿನ ಲೇಡಿಹಿಲ್ ಪೊಂಪೈ ಪ್ರೌಢಶಾಲೆಯ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉನ್ನತ ಅಂಕ ಗಳಿಸಿ ಉತ್ತೀರ್ಣರಾಗಿದ್ದರು.
ದ್ವಿತೀಯ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಶಾಲೆಗಳ ಒಟ್ಟು 25 ವಿದ್ಯಾರ್ಥಿಗಳು ಎಸೆಸೆಲ್ಸಿ ಯಲ್ಲಿ ತುಳು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಆದರೆ ಈ ಸಲ ದಾಖಲೆಯ ಅಂದರೆ 313 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದಿದ್ದಾರೆ.