ಮಂಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕರಾವಳಿ ಭಾಗಕ್ಕೆ ಮೂರು ಗೌರವಗಳು ಲಭಿಸಿವೆ. ಕರಾವಳಿಯ ಕಲಾರಾಧನೆ ಆಧಾರಿತ ತುಳುವಿನ 78ನೇ ಸಿನೆಮಾ "ಮದಿಪು' ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕುಸಲ್ದರಸೆ ನವೀನ್ ಡಿ. ಪಡೀಲ್ "ಕುಡ್ಲ ಕೆಫೆ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರಾವಳಿ ಮೂಲದ ರಕ್ಷಿತ್ ಶೆಟ್ಟಿ ನೇತೃತ್ವದ "ಕಿರಿಕ್ ಪಾರ್ಟಿ' ಚಿತ್ರ ಅತ್ಯುತ್ತಮ ಮನೋರಂಜನ ಚಿತ್ರವಾಗಿ ಮೂಡಿಬಂದಿದೆ. ಮದಿಪು ಚಿತ್ರ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ "ಅತ್ಯುತ್ತಮ ಪ್ರಾದೇಶಿಕ ಚಿತ್ರ' ಎಂಬ ಗೌರವಕ್ಕೆ ಎ. 8ರಂದು ಭಾಜನವಾಗಿತ್ತು.
ಇದೀಗ ಮತ್ತೆ ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸುವ ಮೂಲಕ ತುಳು ಚಿತ್ರರಂಗಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಆಸ್ಥಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ "ಮದಿಪು' ಚಿತ್ರದ ಕಥೆ, ಚಿತ್ರಕಥೆ, ಕಲಾ ನಿರ್ದೇಶನವನ್ನು ಚೇತನ್ ಮುಂಡಾಡಿ ಮಾಡಿದ್ದು, ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಪಕರು. ಈ ಚಿತ್ರ ಮಾ. 10ರಂದು ನಗರದ ಸುಚಿತ್ರಾ ಟಾಕೀಸ್ ಸೇರಿದಂತೆ ಕರಾವಳಿಯ 9 ಥಿಯೇಟರ್ನಲ್ಲಿ ಬಿಡುಗಡೆಗೊಂಡಿತ್ತು.