ಮಂಗಳೂರು: ದೇಶದ ವಿವಿಧೆಡೆ ದುಷ್ಕೃತ್ಯ ನಡೆಸಲು ಬಾಂಬ್ ಪೂರೈಸಿದ ಆರೋಪದಲ್ಲಿ ದೇಶದ ನಾನಾ ಕಡೆ ಜೈಲಿನಲ್ಲಿರುವ ಮೂವರನ್ನು ವಿಚಾರಣೆ ನಡೆಸಲು ಬಾಡಿ ವಾರಂಟ್ ಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ಬಾಂಬ್ ಪೂರೈಕೆಗೆ ಸಂಬಂಧಿಸಿ ೧೩ ಮಂದಿಯ ವಿರುದ್ಧದ ಆರೋಪದಲ್ಲಿ ಈಗಾಗಲೇ ೭ ಮಂದಿಯ ವಿಚಾರಣೆ ನಡೆದಿದ್ದು, ಇದರಲ್ಲಿ ಮೂವರ ಅಪರಾಧ ಸಾಬೀತಾಗಿದೆ. ನಾಲ್ವರು ದೋಷಮುಕ್ತಿಯಾಗಿದ್ದಾರೆ. ಉಳಿದಂತೆ ೬ ಮಂದಿಯ ಪೈಕಿ ಮೂವರಾದ ಯಾಸೀನ್ ಭಟ್ಕಳ್ ತಿಹಾರ್ ಜೈಲಿನಲ್ಲಿ, ಕಯಾಮುದ್ದೀನ್ ಕಪಾಡಿಯಾ ಅಹಮದಾಬಾದ್ ನ ಸಬರಮತಿ ಜೈಲಿನಲ್ಲಿ ಹಾಗೂ ಅಕ್ಬರ್ ಚೌಧರಿ ಮುಂಬಯಿ ಸೆಂಟ್ರಲ್ ಜೈಲಿನಲ್ಲಿ ವಿಚಾರಾಣಾಧೀನ ಖೈದಿಗಳಾಗಿದ್ದಾರೆ.
ಈ ಮೂವರನ್ನು ಅಲ್ಲಿನ ಪೊಲೀಸರು ಉಗ್ರ ಕೃತ್ಯದ ತನಿಖೆಗಾಗಿ ಇರಿಸಿಕೊಂಡಿದ್ದಾರೆ. ಸಿಆರ್ ಪಿಸಿ ಕಾಯಿದೆಯ ಪ್ರಕಾರ ತನಿಖೆ ಮುಕ್ತಾಯದವರೆಗೆ ಆರೋಪಿಗಳನ್ನು ಇರಿಸಿಕೊಳ್ಳುವ ಅಧಿಕಾರವಿದ್ದು, ಅಲ್ಲಿ ತನಿಖೆ ಮುಗಿದ ಬಳಿಕ ಆರೋಪಿಗಳನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.