ಮಂಗಳೂರು: ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಕರಿಂಗಾನದಲ್ಲಿ ಶುಕ್ರವಾರ ತಂದೆಯ ಕೊಲೆಗೈದು ಅಣ್ಣನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಆರೋಪಿ ಡಾಲ್ಫಿ ಗೋವಿಯಸ್ ನನ್ನು(೩೫) ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಆದಿತ್ಯವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು, ಆರೋಪಿ ಡಾಲ್ಫಿ ಗೋವಿಯಸ್ ಮೃತರ ಕಿರಿಯ ಪುತ್ರನಾಗಿದ್ದು, ಮೂಡಬಿದಿರೆಯಲ್ಲಿ ಶಾಮಿಯಾನ ವ್ಯವಹಾರ ನಡೆಸುತ್ತಿದ್ದನು.
ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಹಾಗೂ ಮಾರಾಣಾಂತಿಕ ಹಲ್ಲೆ ನಡೆದಿದೆ. ಆರೋಪಿಯು ತನ್ನ ತಂದೆ ಪೌಲ್ ಗೋವಿಯಸ್(೮೩) ಅವರನ್ನು ಹತ್ಯೆ ಮಾಡಿದ ಬಳಿಕ ತನ್ನ ಹಿರಿಯ ಸಹೋದರ ಸ್ಟ್ಯಾನಿ ಗೋವಿಯಸ್(೪೫) ಅವರ ಮೇಲೆ ಮಾರಾಂಣಾತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಉಪವಿಭಾಗ ಡಿಸಿಪಿ ರಾಜೇಂದ್ರ ಮಾರ್ಗದರ್ಶನದಂತೆ ತನಿಖಾಧಿಕಾರಿ ರಾಮಚಂದ್ರ ನಾಯಕ್, ಮೂಡಬಿದಿರೆ ಠಾಣಾ ಸಿಬ್ಬಂದಿ ಡಾಲ್ಫಿ ಗೋವಿಯಸ್ ನನ್ನು ರವಿವಾರ ಮಧ್ಯಾಹ್ನ ಕಾರ್ಕಳ ಅಜೆಕಾರು ಪೇಟೆಯಲ್ಲಿ ಸ್ವಾಧೀನಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಕೃತ್ಯ ನಡೆಸಿರುವುದಾಗಿ ಈ ವೇಳೆ ಆತ ಒಪ್ಪಿಕೊಂಡಿದ್ದಾನೆ. ತಾಯಿಯ ಕೊಲೆ ಆರೋಪವನ್ನು ಹೊರಿಸಿದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರುವುದಾಗಿ ಆತ ತಿಳಿಸಿದ್ದು, ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಮಾಹಿತಿಗಳನ್ನು ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.