ಮಂಗಳೂರು: ಐದು ಬಾರಿ ಜೀವವನ್ನೇ ಪಣಕ್ಕಿಟ್ಟು ಭಾರತ ಮಾತೆಯ ಸೇವೆಗೈದಿದ್ದ ಧೀರ ಯೋಧನೊಬ್ಬ ಉಗ್ರರ ದಾಳಿಗೆ ಸಿಲುಕಿ ಗಂಭೀರ ಸ್ಥಿತಿಗೆ ತಲುಪಿ ಸುಮಾರು ಅರ್ಧ ವರ್ಷ ಆಸ್ಪತ್ರೆಯ ಬೆಡ್ನಲ್ಲಿ ಮಲಗಿ ಈಗ ಚೇತರಿಸಿಕೊಂಡು ಹುಟ್ಟೂರಿಗೆ ಮರಳಿದ್ದಾರೆ. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸಂತೋಷ್ ಕುಲಾಲ್ ಅವರೇ ಉಗ್ರರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ. ಅವರು ಅ. 12ರಂದು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೋರ್ನಲ್ಲಿ ಉಗ್ರರೊಡನೆ ಹೋರಾಡಿ ಗುಂಡೇಟಿಗೆ ಸಿಲುಕಿ ಸಾವು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆ ಬಳಿಕ ಹುಟ್ಟೂರು ಮುಡಿಪುವಿಗೆ ಆಗಮಿಸಿದ್ದಾರೆ.
ದೇಶ ಸೇವೆಯ ತುಡಿತ
ಬಂಟ್ವಾಳದ ರಾಮಣ್ಣ ಸಾಲಿಯಾನ್-ವಿಮಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವರು. ಚಿಕ್ಕಂದಿನಲ್ಲಿಯೇ ತಂದೆ ನಿಧನರಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಮುಡಿಪು ಸರಕಾರಿ ಶಾಲೆಯಲ್ಲಿ ಕಲಿತರು. ಪಿಯುಸಿ ಮುಗಿಸಿ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾದರು. 2003ರಿಂದ 2016ರ ವರೆಗೆ ಜಮು-ಕಾಶ್ಮೀರ ಸೇರಿದಂತೆ ನಾಗಾಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ನಕ್ಸಲ್ ಸಹಿತ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್ನಲ್ಲಿದ್ದ ಸಂತೋಷ್ ಅವರು ಕಮಾಂಡೋ ಕೋರ್ಸ್ ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.