ಮಂಗಳೂರು: ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಎ.೧೮ರಂದು ಭೇಟಿ ನೀಡಿ ಅಲ್ಲಿನ ವಾಸ್ತವಾಂಶಗಳ ಪರಿಶೀಲನೆ ನಡೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡುಮನೆ ಪ್ರದೇಶದಿಂದ ಪರಿಶೀಲನೆ ಆರಂಭಿಸಿ ವಾಸ್ತವತೆಯ ಬಗ್ಗೆ ವಿವರ ಪಡೆಯಲಿದ್ದೇನೆ. ಈ ಸಂದರ್ಭ ಕೋಲಾರ ಭಾಗದ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯಿಂದ ಕೋಲಾರ ಭಾಗದ ಜನರಿಗೆ ಕುಡಿಯುವ ನೀರಿಗೆ ಸಂಬಂಧಪಟ್ಟು ಹೆಚ್ಚಿನ ಪ್ರಯೋಜನವಾಗದು. ಇದೊಂದು ದುಡ್ಡು ಹೊಡೆಯುವ ಯೋಜನೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆಗ ನನ್ನ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಈಗ ಅಲ್ಲಿ ಕಾಮಗಾರಿಯ ಚಿತ್ರಣ ನೋಡಿದ ಬಳಿಕ ಅವರಿಗೆ ನನ್ನ ಹೇಳಿಕೆ ವಾಸ್ತವಾಂಶಗಳಿಂದ ಕೂಡಿದೆ ಎಂದು ಅರಿವಾಗತೊಡಗಿದೆ ಎಂದು ಹೇಳಿದರು.