ಮಂಗಳೂರು: ಮಾನವ ಹಕ್ಕು ಉಲ್ಲಂಘನೆ ನೆಪದಲ್ಲಿ ಜಮ್ಮು ಕಾಶ್ಮೀರ ವ್ಯಾಪ್ತಿಯಲ್ಲಿ ನಮ್ಮ ಸೈನಿಕರ ಮೇಲೆ ನಡೆಯುತ್ತಿರುವ ಆರೋಪ ಹಾಗೂ ಘಟನೆಗಳು ಸಮರ್ಥನೀಯವಲ್ಲ ಎಂದು ಕಾರ್ಗಿಲ್ ಯುದ್ಧದ ಸಂದರ್ಭ ಭಾರತೀಯ ಸೇನೆಯ ಸೇನಾಧಿಕಾರಿಯಾಗಿದ್ದ ಜನರಲ್ ವೇದ್ ಪ್ರಕಾಶ್ ಮಲಿಕ್ ಹೇಳಿದರು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ನಿಟ್ಟೆ ವಿದ್ಯಾಸಂಸ್ಥೆ, ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಜಿಲ್ಲೆ 317 ಡಿ ಮತ್ತು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಬುಧವಾರ ಆಯೋಜಿಸಲಾದ "ಕಾರ್ಗಿಲ್ ಯುದ್ಧ-1999' ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಜಗತ್ತಿನ ಯಾವುದೇ ದೇಶಕ್ಕೆ ಹೋಲಿಸಿದರೆ ಭಾರತದಷ್ಟು ಮಾನವ ಹಕ್ಕುಗಳ ರಕ್ಷಣೆ ಬೇರೆ ಯಾವ ದೇಶದಲ್ಲೂ ಆಗುವುದಿಲ್ಲ. ಪಾಕಿಸ್ಥಾನದಲ್ಲಿ ಮಾನವ ಹಕ್ಕು ಅನ್ನುವಂತದ್ದು ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಪ್ರತೀ ನಡೆಗೂ ಮಾನವ ಹಕ್ಕು ಎಂಬುದನ್ನು ತೋರಿಸಲಾಗುತ್ತಿದೆ. ಮಂಗಳೂರಿನಲ್ಲೋ ಅಥವಾ ಬೇರೆ ಎಲ್ಲೋ ನಿಂತು ಕಾಶ್ಮೀರದಲ್ಲಿ ಸೈನಿಕ ರಿಂದ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾತನಾಡಿದರೆ, ಬರೆದರೆ ಅವರನ್ನು ಕಾಶ್ಮೀರಕ್ಕೆ ಹೋಗಿ ಅಲ್ಲಿನ ಸ್ಥಿತಿ ತಿಳಿದುಕೊಳ್ಳಲು ಹೇಳಿ ಎಂದು ಅವರು ಹೇಳಿದರು.ಈ ಸಂದರ್ಭ ಮಲಿಕ್ ಅವರ ಪತ್ನಿ ಮಿಲಿಟರಿಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ ರಂಜನಾ, ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಲಯನ್ಸ್ ಜಿಲ್ಲಾ ಗವರ್ನರ್ 317 ಡಿ ಯ ಅರುಣ್ ಶೆಟ್ಟಿ, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯನಾಥ ವಿಠಲ್ ಶೆಟ್ಟಿ, ಸಂಘದ ಅಧ್ಯಕ್ಷ ವಿಕ್ರಮ್ ದತ್ತ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಐರನ್, ಖಜಾಂಚಿ ಬಾಲಕೃಷ್ಣ ಎನ್. ಉಪಸ್ಥಿತರಿದ್ದರು.