ಮಂಗಳೂರು: ಭಜರಂಗ ದಳನ ನಾಯಕರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬೇಂಗ್ರೆಯಲ್ಲಿ ನಡೆದಿದೆ. ಸಾವನ್ನಪ್ಪಿರುವರನ್ನು ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದೆ. 35 ವರ್ಷ ವಯಸ್ಸಿನ ಜಗದೀಶ್ ಸುವರ್ಣ ಆನಂದ್ ಸುವರ್ಣ ಎಂಬುವವರ ಮಗನಾಗಿದ್ದು ಭಜರಂಗ ದಳ ಬೇಂಗ್ರೆ ಘಟಕದ ಸಂಚಾಲಕರಾಗಿದ್ದರು.
ಬೇಂಗ್ರೆಯಲ್ಲಿ ನಾಗರಿಕರನ್ನು ಹೊತ್ತೊಯ್ಯುವ ಬೋಟ್ ನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಭಜರಂಗದಳದ ಜತೆ ಗುರುತಿಸಿಕೊಂಡಿ ಜಗದೀಶ್ ಸುವರ್ಣ ಗುರುವಾರ ರಾತ್ರಿ ಸ್ಥಳೀಯ ಮನೆಯೊಂದಕ್ಕೆ ಮೆಹೆಂದಿ ಕಾರ್ಯಕ್ರಮದ ನಿಮಿತ್ತ ಹೋಗಿದ್ದರು.ಆದರೆ ಮೆಹೆಂದಿಗೆ ಹೋದವರು ವಾಪಾಸಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಅವರ ದೇಹ ಬೇಂಗ್ರೆಯ ಅಳಿವೆ ಬಾಗಿಲಿನ ಸಮೀಪ ಪತ್ತೆಯಾಗಿದೆ.
ಇದು ಕೊಲೆಯೋ, ಆತ್ಯಹತ್ಯೆಯೋ ಎಂದು ತನಿಖೆಯಿಂದಷ್ಟೆ ಹೊರ ಬರಬೇಕಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ಶವ ಮಹಜರು ನಡೆಸಲಾಗಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.