ಮಂಗಳೂರು; ಮೈಯಲ್ಲಿ ಹುಣ್ಣು ಇದ್ದ ಕಾರಣ ಉಪ್ಪು ನೀರಿನ ಸ್ನಾನಕ್ಕೆಂದು ಸಮುದ್ರಕ್ಕಿಳಿದಿದ್ದ ವೇಳೆ ಸಮುದ್ರಪಾಲಾಗಿದ್ದ ಯುವಕನ ಮೃತದೇಹವನ್ನು ತಣ್ಣೀರುಬಾವಿ ಮುಳುಗು ತಜ್ಞರ ತಂಡ ಮೇಲಕ್ಕೆತ್ತಿದೆ.ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್ ಬಳಿ ರವಿವಾರ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ಹನೀಫ್ (31) ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸಂಜೆಯವರೆಗೆ ಹನೀಫ್ ಪತ್ತೆಯಾಗದಿರುವುದನ್ನು ಗಮನಿಸಿದ ಉಳ್ಳಾಲ ಪೊಲೀಸರು ತಣ್ಣಿರು ಬಾವಿ ಮುಳುಗು ತಜ್ಞರನ್ನು ಕರೆಸಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಕೋಟೆಪುರ, ಮೊಗವೀರಪಟ್ಣ, ಮುಕ್ಕಚ್ಚೇರಿಯಿಂದ ಮೀನುಗಾರರು, ಈಜುಗಾರರು ಆಗಮಿಸಿ ಶೋಧಕಾರ್ಯಕ್ಕೆ ಸಹಕರಿಸಿದ್ದರು.
ಸಚಿವ ಖಾದರ್ ಭೇಟಿ: ಸಚಿವ ಯು.ಟಿ. ಖಾದರ್ ಶೋಧಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು. ಉಳ್ಳಾಲ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಎಸ್ಐಗಳಾದ ರಾಜೇಂದ್ರ, ಪ್ರಕಾಶ್ ಆಗಮಿಸಿದ್ದರು. ಅಗ್ನಿಶಾಮಕದಳ ಶೋಧಕಾರ್ಯದಲ್ಲಿ ತೊಡಗಿಸಿಕೊಂಡಿಸಿತ್ತು.ವೃತ್ತಿಯಲ್ಲಿ ಪೈಂಟರಾಗಿದ್ದ ಹನೀಫ್ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರು ಬಡಕುಟುಂಬದವರಾಗಿದ್ದು ಮನೆಗೆ ಆಧಾರಸ್ತಂಭವಾಗಿದ್ದರು