ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ತುಳು ಸ್ನಾತಕೋತ್ತರ ಪದವಿ ಆರಂಭಕ್ಕೆ ಚಿಂತನೆ ನಡೆಸಿದೆ. ಜತೆಗೆ ಪದವಿ ಮಟ್ಟದಲ್ಲಿ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಜಾರಿಗೊಳಿಸಲು ನಿರ್ಧರಿಸಿದೆ. ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಕಚೇರಿ ಈ ಸಂಬಂಧ ನೋಟೀಸೊಂದನ್ನು ಬಿಡುಗಡೆಗೊಳಿಸಿದ್ದು, ಪಠ್ಯವಿಷಯ ಮತ್ತು ನಿಯಮಗಳ ಕರಡು ರಚನೆಗೆ ಸಮಿತಿಯೊಂದನ್ನು ರಚಿಸುವಂತೆ ಸೂಚಿಸಿದೆ.
ಈ ಸಮಿತಿಯು ಕನ್ನಡ ಪ್ರೊಫೆಸರ್ ಅಭಯ್ ಕುಮಾರ್ ಮುಂದಾಳತ್ವದಲ್ಲಿರಬೇಕು ಎಂದು ತಿಳಿಸಿದೆ.ಹಿಂದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿಶ್ವವಿದ್ಯಾನಿಲಯಕ್ಕೆ ಮನವಿಯೊಂದನ್ನು ಸಲ್ಲಿಸಿ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ತುಳು ಅಧ್ಯಯನಕ್ಕೆ ಅವಕಾಶ ಒದಗಿಸುವಂತೆ ಕೋರಿತ್ತು. ಮನವಿಯಲ್ಲಿ ಪದವಿ ಮಟ್ಟದಲ್ಲಿ ತುಳುವನ್ನು ಮೂರು ಐಚ್ಚಿಕ ವಿಷಯಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು.ಸಮಿತಿಯು ಈಗ ಪಠ್ಯಕ್ಕೆ ವಿಷಯಗಳನ್ನು ಸಂಗ್ರಹಿಸುತ್ತಿದೆ. ನಂತರ ಪಠ್ಯದ ಮತ್ತು ನಿಯಮಗಳ ಕರಡನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಲಿದೆ.
ಬಳಿಕ ವಿಶ್ವವಿದ್ಯಾನಿಲಯವು 2018-19ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ತುಳುವನ್ನು ಐಚ್ಚಿಕ ವಿಷಯವಾಗಿ ಜಾರಿಗೊಳಿಸಲಿದೆ ಎಂದು ಅಭಯ್ ಕುಮಾರ್ ಹೇಳಿದ್ದಾರೆ.2016ರ ಡಿಸೆಂಬರ್ 21ರಂದು ವಿಶ್ವವಿದ್ಯಾನಿಲಯಕ್ಕೆ ತುಳು ಕೊರ್ಸ್ ಆರಂಭಿಸುವಂತೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮನವಿ ಸಲ್ಲಿಸಿದ್ದರು.