ಮಹಾನಗರ: ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತುಂಬೆಯ ನೂತನ ಅಣೆಕಟ್ಟಿನಲ್ಲಿ 7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಲು ಭೂಸ್ವಾಧೀನಕ್ಕೆ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ಹೇಳಿದರು.ತುಂಬೆ ವೆಂಟೆಡ್ಡ್ಯಾಂಗೆ ಗುರುವಾರ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿದ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ನಗರದ ಶಾಸಕರು, ಪಾಲಿಕೆ ಮೇಯರ್ ಮತ್ತು ಕಾರ್ಪೊರೇಟರ್ಗಳನ್ನು ಒಳಗೊಂಡ ನಿಯೋಗವೊಂದು ಸಿಎಂ ಬಳಿ ತೆರಳಿ 7 ಮೀಟರ್ ನೀರು ಸಂಗ್ರಹ ಮಾಡುವು ದರಿಂದ ಮುಳುಗಡೆಯಾಗುವ ಭೂಮಿಯ ಸ್ವಾಧೀನ ಮಾಡಿ ಪರಿಹಾರ ನೀಡಲು ಅವಶ್ಯವಿರುವ ಅನುದಾನವನ್ನು ಶೀಘ್ರ ಮಂಜೂರು ಮಾಡುವಂತೆ ಒತ್ತಾಯಿಸಲಾಗುವುದು.ವೆಂಟೆಡ್ ಡ್ಯಾಂನಲ್ಲಿ 7 ಮೀಟರ್ ನೀರು ಸಂಗ್ರಹವಾದರೆ ಮಂಗಳೂರು ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿರುವುದು. ರೈತರಿಗೆ ಶಾಶ್ವತ ಪರಿಹಾರ ಒದಗಿಸಲು 7 ಕೋ.ರೂ. ಈಗಾಗಲೇ ಸರಕಾರ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.