ಮಂಗಳೂರು: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಬಸ್ಸಿನಲ್ಲಿ ಬರುವ ಪ್ರವಾಸಿಗರನ್ನು ನಿಸರ್ಗಧಾಮದ ಒಳಗಡೆ ವಿವಿಧ ಘಟಕಗಳಿಗೆ ಕರೆದೊಯ್ಯಲು ಮೇ ೧ ರಿಂದ ಮಿನಿ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ‘ಪಿಲಿಕುಳ ದರ್ಶನ’ ಎಂಬ ಹೆಸರಿನಲ್ಲಿ ಈ ಬಸ್ ವ್ಯವಸ್ಥೆಯ ಮೂಲಕ ಪ್ರವಾಸಿಗರು ಪಿಲಿಕುಳದ ವಿವಿಧ ಘಟಕಗಳಿಗೆ ಪ್ರಯಾಣಿಸಬಹುದು.
ದೂರದ ಊರುಗಳಿಂದ ಬರುವ ಪ್ರವಾಸಿಗರು ವಾಮಂಜೂರಿನ ಟಿ.ಬಿ. ಆಸ್ಪತ್ರೆ ಬಳಿ ಇಳಿದಲ್ಲಿ ಅಲ್ಲಿಂದ ಈ ಮಿನಿ ಬಸ್ ಮೂಲಕ ಪಿಲಿಕುಳದ ಎಲ್ಲಾ ಘಟಕಗಳಿಗೆ ಪ್ರಯಾಣಿಸಬಹುದು. ಬೆಳಿಗ್ಗೆ ೯.೩೦ರಿಂದ ಸಂಜೆ ೫.೩೦ ರವರೆಗೆ ಗಂಟೆಗೆ ಒಂದು ಸಲದಂತೆ ಈ ವಾಹನ ಪ್ರಯಾಣ ಬೆಳೆಸಲಿದೆ ಎಂದು ನಿಸರ್ಗಧಾಮದ ಅಧಿಕಾರಿಗಳು ತಿಳಿಸಿದ್ದಾರೆ.