Sunday 28th, April 2024
canara news

ವಿಂಶತಿ ಮಹೋತ್ಸವದ ಸಂಭ್ರಮದಲ್ಲಿ ಬೀಜಾಡಿ ಮಿತ್ರ ಸಂಗಮ

Published On : 02 May 2017   |  Reported By : Bernard J Costa


ಕುಂದಾಪುರ: ಯುವ ಶಕ್ತಿಯ ಸದ್ವಿನಿಯೋಗದ ಆಶಯದೊಂದಿಗೆ ಒಂದಷ್ಟು ಮಂದಿ ಆಟವಾಡುತ್ತಾ ಕಳೆಯುತ್ತಿದ್ದ ಸಮಾನ ಮನಸ್ಸಿನ ತರುಣ ಮನಸ್ಸುಗಳು ಮಿತ್ರ ಸಂಗಮವಾಗಿ ರೂಪಗೊಂಡ ಬೆರಗಿಗೆ ಇದೀಗ 20ರ ಸಂಭ್ರಮ. ಈ ಸಮಾನ ಮನಸ್ಕರ ಎಲ್ಲ ಕಲ್ಪನೆಯ ಕನಸುಗಳನ್ನು ನೆಲಸ ಮೇಲೆ ಹಸಿರಾಗಿಸುವ ಪ್ರಯತ್ನ ಅಂದಿನಿಂದ ಆರಂಭಿಸಲಾಗಿದ್ದು, ಸದಸ್ಯರ ಉತ್ಸಾಹ ಪೂರ್ಣ ದುಡಿಮೆ ಇಲ್ಲಿ ಅರ್ಥದ ಪರಿವೇಶವನ್ನು ಕಟ್ಟಿತು. 1997ರಲ್ಲಿ ಹುಟ್ಟಿಕೊಂಡ ಮಿತ್ರ ಸಂಗಮ ಅಂದಿನಿಂದ ಗ್ರಾಮೀಣ ಜನರಿಗೆ ವಿವಿಧ ರೀತಿಯ ಸಹಕಾರವನ್ನು ಮಾಡುತ್ತಾ ಜನರಿಗೆ ಅತೀ ಅಗತ್ಯವಾದ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವುದರ ಮೂಲಕ ಹೆಸರು ಮಾಡಿದೆ.

ಮಿತ್ರ ಸಂಗಮ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಸೊಸೈಟಿ ಕಾಯ್ದೆ ಪ್ರಕಾರ ನೋಂದಾಯಿತ ಸಂಸ್ಥೆಯಾಗಿದ್ದು, 2007ರಲ್ಲಿ ಸಂಸ್ಥೆ ದಶಮಾನೋತ್ಸವವನ್ನು ಆಚರಿಸಿಕೊಂಡು ದಶಮಾನೋತ್ಸವದ ನೆನಪಿಗಾಗಿ ಸುಂದರ ದಶಮಾನೋತ್ಸವದ ಭವನ "ಮಿತ್ರಸೌಧ"ವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದೆ. ಈ ಸಂದರ್ಭದಲ್ಲಿ ಸಂಸ್ಥೆಗೆ ಭಾರತ ಸರಕಾರದ ನೆಹರು ಯುವ ಕೇಂದ್ರದ ಮೂಲಕ ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಹಾಗೂ 2017ರಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನಡೆದ 11ನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಂಸ್ಥೆಯ ಜನಪರ ಸೇವೆಗೆ ಸನ್ಮಾನ ಮಾಡಿ ಗೌರವಿಸಿದೆ.

ಈ ಭಾರಿ ಸಂಸ್ಥೆಗೆ ವಿಂಶತಿ ಮಹೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ಪ್ರಯುಕ್ತ ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳ, ಕುಂದಾಪುರ ತಾಲೂಕು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ದೇಶಭಕ್ತಿ ಸ್ಪರ್ಧೆ,ಬೃಹತ್ ಆಧಾರ್ ಮತ್ತು ಪಾನ್ ಕಾರ್ಡ್ ನೊಂದಣೆ ಶಿಬಿರ, ಬೃಹತ್ ಆರೋಗ್ಯ ಶಿಬಿರವನ್ನು ಸಂಘಟಿಸಿಕೊಂಡು ಇದೀಗ ವಿಂಶತಿ ಮಹೋತ್ಸವಕ್ಕೆ ಸಜ್ಜುಗೊಂಡಿದ್ದೇವೆ. ವಿಂಶತಿ ಮಹೋತ್ಸವದ ಪ್ರಯುಕ್ತ ಸಂಸ್ಥೆಯ ದಶಮಾನೋತ್ಸವಭವನ ಮಿತ್ರ ಸೌಧವನ್ನು ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದ್ದು, ವಿಂಶತಿ ಮಹೋತ್ಸವದ ಸಮಾರಂಭ ಮೇ.5 ಮತ್ತು 6 ರಂದು ಜರುಗಲಿದೆ.

ಮೇ.5,6ರಂದು ವಿಂಶತಿ ಮಹೋತ್ಸವ

ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ವಿಜೇತ ಬೀಜಾಡಿ-ಗೋಪಾಮಿತ್ರ ಸಂಗಮದ ಸಂಭ್ರಮದ ವಿಂಶತಿ ಮಹೋತ್ಸವ ಸಮಾರಂಭ ಮೇ.5 ಮತ್ತು 6ರಂದು ಬೀಜಾಡಿ ಮಿತ್ರಸೌಧದ ವಠಾರದಲ್ಲಿ ನಡೆಯಲಿದೆ. ಮೇ.5ರಂದು ಶುಕ್ರವಾರ ಸಾಮೂಹಿಕ ಸತ್ಯನಾರಾಯಣ ಪೂಜೆ,ನವೀಕೃತ ಕಟ್ಟಡ "ಮಿತ್ರಸೌಧ" ಉದ್ಘಾಟನೆ ಜರುಗಲಿದ್ದು, ಉಡುಪಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ನವೀಕೃತ ಕಟ್ಟಡ "ಮಿತ್ರಸೌಧ"ವನ್ನು ಉದ್ಘಾಟಿಸಲಿದ್ದಾರೆ. ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರಂಭದ ಬಳಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ಮೇ.6ರಂದು ಶನಿವಾರ ಸಂಜೆ 7ಕ್ಕೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,20 ಮಂದಿ ಎಲೆಮರೆಯ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಧನ, ಹೊಲಿಗೆ ಯಂತ್ರ ವಿತರಣೆ,ಗಾಲಿಕುರ್ಚಿ,ಊರುಗೋಲು ವಿತರಣೆ,ನಮ್ಮೂರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಂಶತಿ ದರ್ಶನ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಲಿದ್ದಾರೆ.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ವಿಂಶತಿ ದರ್ಶನ ಸ್ಮರಣ ಸಂಚಿಕೆ ಬಿಡುಗಡೆಯನ್ನು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನೆರವೇರಿಸಲಿದ್ದು,20 ಮಂದಿ ಸಾಧಕರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸನ್ಮಾನಿಸಲಿದ್ದಾರೆ.ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ ಅಶಕ್ತರಿಗೆ ಸಹಾಯಧನ ವಿತರಣೆ,ವಿಕಲಚೇತನರಿಗೆ ಗಾಲಿ ಕುರ್ಚಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ,ಹೊಲಿಗೆ ಯಂತ್ರವನ್ನು ಕುಂದಾಪುರದ ಸಹಾಯಕ ಆಯುಕ್ತೆ ಶಿಲ್ಪಾನಾಗ್,ಕುಂದಾಪುರದ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ವಿಕಚೇತನರಿಗೆ ಊರು ಗೋಲಿನ ವಿತರಣೆ ಮಾಡಲಿದ್ದಾರೆ. ವರ್ಷಂಪ್ರತಿ ಸಂಸ್ಥೆ ಕೊಡಮಾಡುವ ನಮ್ಮೂರ ಪ್ರಶಸ್ತಿಯನ್ನು ಮೂಡುಗೋಪಾಡಿಯ ಪ್ರಗತಿಪರ ಕೃಷಿಕ ರಫೀಕ್ ಬ್ಯಾರಿ ಅವರಿಗೆ ಪ್ರದಾನ ಮಾಡಲಾಗುವುದು.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು,ಕೆ.ನವೀನ್‍ಚಂದ್ರ ಕೊಪ್ಪ ನೇತೃತ್ವದ ಶಿವಾನಿ ಮ್ಯೂಸಿಕಲ್ಸ್ ಆರ್ಕೆಸ್ಟ್ರಾ ಇವರಿಂದ ಅದ್ದೂರಿಯ ಸಂಗೀತ ರಸಮಂಜರಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತ ಕ್ರೇಸಿ ಗಯ್ಸ್ ತಂಡದವರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here