ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 11 ಆರೋಪಿಗಳಲ್ಲಿ ಹೆಚ್ಚಿನವರು ಸಂಘ ಪರಿವಾರಕ್ಕೆ ಸೇರಿದವರರಾಗಿದ್ದು ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೇರ ಆರೋಪ ಮಾಡಿದರು. ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಲೀಲ್ ಗ್ರಾ. ಪಂ. ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುತ್ತಾ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆದವು.
ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದಾಗ ಆರೋಪಿಗಳಲ್ಲಿ ಸಾಕಷ್ಟು ಮಂದಿ ಸಂಘ ಪರಿವಾರದವರು ಇರುವುದು ಬಯಲಾಗಿದೆ ಎಂದರು.ಹತ್ಯೆ ಪ್ರಕರಣದಲ್ಲಿ ವಿಕ್ಕಿ ಶೆಟ್ಟಿಯ ಪಾತ್ರವಿದೆ ಎಂಬ ಬಗ್ಗೆ ಪೊಲೀಸರ ಮಾಹಿತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತನಿಖೆ ಮುಂದುವರಿದಿದೆ. ಇನ್ನೂ ಕೆಲವರು ಇರುವ ಗುಮಾನಿ ಇದೆ. ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಕ್ರಮಕೈಗೊಳ್ಳುವ ಕಾರ್ಯವನ್ನು ಪೊಲೀಸರು ಮಾಡುತ್ತಾರೆ. ಮೇ 2ರಂದು ಗೃಹಸಚಿವರು ಜಿಲ್ಲೆಗೆ ಆಗಮಿಸಲಿದ್ದು ಜಲೀಲ್ ಮನೆಗೆ ಭೇಟಿ ನೀಡಲಿದ್ದಾರೆ. ನಾನು ಈ ಬಗ್ಗೆ ಸಚಿವರಲ್ಲಿ ವಿನಂತಿಸಿದ್ದೆನೆ ಎಂದು ವಿವರಿಸಿದರು.