ಮಂಗಳೂರು: ದ..ಕ. ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭದ್ರತೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಜಾಮರ್ ಬದಲು ಮೊಬೈಲ್ ಸೆಕ್ಯೂರಿಟಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂಧಿಖಾನೆ ಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ. ಖೈದಿಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ, ಖೈದಿಗಳ ಸಂಬಂಧಿಕರಿಗೆ ಅನುಕೂಲತೆ ಕಲ್ಪಿಸುವುದಕ್ಕಾಗಿ ಮಂಗಳೂರು ಸಬ್ ಜೈಲಿನಲ್ಲಿ ನಿರ್ಮಿಸಲಾಗಿರುವ ೧೭.೫ ಲಕ್ಷ ರೂ. ವೆಚ್ಚದ ಸಂದರ್ಶಕರ ಗ್ಯಾಲರಿಯನ್ನು ಬುಧವಾರ ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿಗೆ ಸಮಾನಾಂತರವಾಗಿ ಮಂಗಳೂರು ಜೈಲನ್ನು ಪರಿಗಣಿಸಲಾಗಿದೆ. ಈ ಜೈಲನ್ನು ಶೀಘ್ರವೇ ಮಂಗಳೂರು ಜೈಲು ಹೊರವಲಯಕ್ಕೆ ಸ್ಥಳಾಂತರಿಸಲಾಗುವುದು. ಮುಡಿಪುವಿನ ಕುರ್ನಾಡು ಗ್ರಾಮದ ೬೮ ಎಕರೆ ಸ್ಥಳದಲ್ಲಿ ೨೦೦ ಕೋ.ರೂ. ವೆಚ್ಚದಲ್ಲಿ ನೂತನ ಕಾರಾಗೃಹ ನಿರ್ಮಾಣಗೊಳ್ಳಲಿದೆ ಎಂದವರು ತಿಳಿಸಿದರು. ಇದೇ ಸಂದರ್ಭ ೧೨.೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಪ್ರವೇಶದ್ವಾರಕ್ಕೆ ಡಿಜಿಪಿ ಸತ್ಯನಾರಾಯಣ ರಾವ್ ಶಿಲಾನ್ಯಾಸ ನೆರವೇರಿಸಿದರು.