ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ , ಗೋಕುಲ ಸಯಾನ್, ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಬಿ. ಎಸ್ ಕೆ ಬಿ ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವದೊಂದಿಗೆ ಆಶ್ರಯ, ನೇರೂಲ್ ನಲ್ಲಿ ರವಿವಾರ ದಿನಾಂಕ 30.4.2017 ರಂದು ಸಂಭ್ರಮದಿಂದ ಆಚರಿಸಿತು.
' ಬಾಲಾಲಯ' ಶ್ರೀ ಕೃಷ್ಣ ಮಂದಿರದಲ್ಲಿ ಬೆಳಗಿನ ನಿತ್ಯಪೂಜೆಯ ನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು. ಉಡುಪಿಯಿಂದ ಆಗಮಿಸಿದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಯವರ ಪೌರೋಹಿತ್ವದಲ್ಲಿ ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮ, ವಾಗೀಶ್ವರಿ ಸರಸ್ವತಿ ಹವನ, ರುದ್ರಾಭಿಷೇಕ, ಶಂಕರಾಚಾರ್ಯರ ಪೂಜೆ ಮತ್ತು ನಾಮಾರ್ಚನೆ ಮುಂತಾದ ಧಾರ್ಮಿಕ ಕೈಂಕರ್ಯಗಳು ವೇ/ಮೂ. ಪ್ರತಾಪ್ ರಾವ್ ಹಾಗೂ ನಾಗೇಶ್ ರಾವ್ ರವರ ಸಹಯೋಗದಿಂದ ಸಾಂಗವಾಗಿ ನೆರವೇರಿದವು.
ಧಾರ್ಮಿಕ ವಿಧಿಗಳ ಕರ್ತೃಗಳಾಗಿ ಅಮಿತ್ ಜನಾರ್ದನ್ ರಾವ್ ಮತ್ತು ಅಮಿತಾ ರಾವ್, ಸದಾಶಿವ ರಾವ್ ಮತ್ತು ಮಮತಾ ರಾವ್, ಎಸ್. ಸಿ. ರಾವ್ ಮತ್ತು ಜ್ಞಾನಸುಂದರಿ ರಾವ್ ಹಾಗೂ ಯು. ಆರ್ ರಾವ್ ಮತ್ತು ಇಂದ್ರಾಣಿ ರಾವ್ ದಂಪತಿಗಳು ಪಾಲ್ಗೊಂಡಿದ್ದರು. ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಪಠನೆ ಹಾಗೂ ಭಜನೆ ಜರಗಿತು. ಹವನದ ಪೂರ್ಣಾಹುತಿಯಾದ ನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ಪುರೋಹಿತ ವರ್ಗದವರಿಂದ ವೇದ ಘೋಷ, ಇಂದ್ರಾಣಿ ರಾವ್ ರಿಂದ ಸಂಗೀತ, ಪ್ರಿಯಾಂಜಲಿ ರಾವ್ ರವರಿಂದ ನೃತ್ಯ ಸೇವೆಯ ನಂತರ ಸರ್ವವಾದ್ಯ ಸೇವೆಗಳು ಜರಗಿದವು. ಬ್ರಹ್ಮಶ್ರೀ ವಾಗೀಶ್ ಶಾಸ್ತ್ರಿಯವರು ಶ್ರೀ ಶಂಕರರ ಆಧ್ಯಾತ್ಮ ತತ್ವಗಳ ಬಗ್ಗೆ ಉಪನ್ಯಾಸ ಗೈದರು. ತೀರ್ಥ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.