ಮಂಗಳೂರು: ಮಂಗಳವಾರ ರಾತ್ರಿ ವೇಳೆ ಸುರಿದ ಗಾಳಿ-ಮಳೆಗೆ ಬಜಪೆ ಪರಿಸರದಲ್ಲಿ ಮರಗಳು ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿವೆ. ಎಕ್ಕಾರು ಹುಣ್ಸೆಕಟ್ಟೆ ಸಮೀಪದ ಹೊಟೇಲೊಂದರ ಮೇಲೆ ಆಲದ ಮರ ಬುಡ ಸಹಿತ ಉರುಳಿಬಿದ್ದು ವ್ಯಕ್ತಿಯೋರ್ವರು ಮೃತಪಪಟ್ಟಿದ್ದಾರೆ.ಹೊಟೇಲ್ ಮಾಲಕ ಸುಂದರ ಪೂಜಾರಿ (47) ಮೃತಪಟ್ಟವರು. ಮಂಗಳ ವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ದುರ್ಘಟನೆ ಸಂಭವಿಸಿದೆ.ರಾತ್ರಿ ಹೊಟೇಲ್ ಮುಚ್ಚಿದ ಬಳಿಕ ಮಾಲಕ ಸುಂದರ ಪೂಜಾರಿ ಅವರು ಪತ್ನಿ, ಓರ್ವ ಪುತ್ರನೊಂದಿಗೆ ಹೊಟೇಲ್ನಲ್ಲಿ ಮಲಗಿದ್ದರು.
ಆ ಸಮಯದಲ್ಲಿ ಮಿಂಚು, ಗಾಳಿ-ಮಳೆ ಆರಂಭವಾಗಿದ್ದು ಭಾರೀ ಗಾಳಿಗೆ ಬೃಹತ್ ಆಲದ ಮರ ಬುಡ ಸಮೇತ ಹೊಟೇಲ್ನ ಮೇಲೆ ಉರುಳಿತು. ಇದೇ ವೇಳೆಗೆ ನೀರು ಕುಡಿಯಲೆಂದು ಮಲಗಿದ್ದಲ್ಲಿಂದ ಎದ್ದು ಹೊಟೇಲ್ನ ಎದುರು ಭಾಗಕ್ಕೆ ಬಂದಿದ್ದ ಸುಂದರ ಪೂಜಾರಿ ಅವರು ಮರ ಹಾಗೂ ಕಲ್ಲುಗಳ ಅಡಿಯಲ್ಲಿ ಸಿಲುಕಿಕೊಂಡರು.ಪತ್ನಿ ಶಶಿಕಲಾ ಮತ್ತು ಪುತ್ರ ವಿಕೇಶ್ ಅವರು ಮರ ಬೀಳುತ್ತಿದ್ದಂತೆ ಹೊಟೇಲಿನಿಂದ ಹಿಂಬದಿಯಿಂದ ಹೊರಗೆ ಓಡಿಬಂದು ಪಾರಾದರು.ಮೃತ ಸುಂದರ ಪೂಜಾರಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಆಗಲಿದ್ದಾರೆ.