ಮಂಗಳೂರು: ಧರ್ಮಸ್ಥಳ ಸಮೀಪ ಪಟ್ರಮೆ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಗುರುತು ಪತ್ತೆಯಾಗಿದ್ದು, ಇದೊಂದು ಕೊಲೆ ಕೃತ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ೬ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಯುವಕನನ್ನು ಮಲವಂತಿಗೆ ಗ್ರಾಮದ ನಿವಾಸಿ ಸುರೇಶ್ ನಾಯ್ಕ(೨೯) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪ್ರಮುಖ ಆರೋಪಿ ಸುಲ್ಕೇರಿ ನಿವಾಸಿ ಆನಂದ ನಾಯ್ಕ ಎಂಬಾತನಾಗಿದ್ದು, ಈತನೊಂದಿಗೆ ಬೆಳ್ತಂಗಡಿ ಚರ್ಚ್ ರೋಡಿನ ಪ್ರವೀಣ ನಾಯ್ಕ್, ಲೋಕೇಶ್ ಮೂಲ್ಯ, ವಿನಯ ಪೂಜಾರಿ ಚಾರ್ಮಾಡಿ,ನಾಗರಾಜ್ ಮೂಲ್ಯ, ಹಾಗೂ ಪ್ರಕಾಶ್ ನಾಯ್ಕ್ ಎಂದು ಗುರುತಿಸಲಾಗಿದೆ.
ಸುರೇಶ್ ನಾಯ್ಕ ಅವರ ವಿವಾಹವು ಕೆಲ ದಿನಗಳ ಹಿಂದೆ ತಾಲೂಕಿನ ಯುವತಿಯೋರ್ವಳೊಂದಿಗೆ ನಿಶ್ಚಯವಾಗಿತ್ತು. ಮದುವೆಗೆ ದಿನವೂ ನಿಗದಿಯಾಗಿತ್ತು. ಈ ನಡುವೆ ಎಪ್ರಿಲ್ ೩೦ರಂದು ಸುರೇಶ್ ಮನೆಯಿಂದ ಉಜಿರೆಗೆ ಬಂದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಸುಡಲ್ಪಟ್ಟ ರೀತಿಯಲ್ಲಿ ಪತ್ತೆಯಾದ ಮೃತದೇಹವನ್ನು ಪರಿಶೀಲಿಸಿದಾಗ ಇದು ಸುರೇಶ್ ನಾಯ್ಕ ಅವರದ್ದು ಎಂಬುದು ಖಚಿತವಾಗಿದೆ. ಬಳಿಕ ಕೊಲೆ ಪ್ರಕರಣವನ್ನು ಬೇಧಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಪೊಲೀಸರ ತನಿಖೆಯಿಂದ ಆರೋಪಿಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶ್ನದಲ್ಲಿ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್ಸೈ ರಾಮನಾಯ್ಕ, ಬೆಳ್ತಂಗಡಿ ಎಸ್ಸೈ ರವಿ ತನಿಖೆಯ ನೇತೃತ್ವ ವಹಿಸಿದ್ದರು.