ಮಂಗಳೂರು: ಶಿರಾಡಿ ಘಾಟಿ ಎರಡನೇ ಹಂತದ ಕಾಂಕ್ರೀಟೀಕರಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದಿನ ತಿಂಗಳಲ್ಲಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರು ಹೇಳಿದರು.ಬುಧವಾರ ಮಂಗಳೂರಿನ ಸರ್ಕ್ಯೂಟ್ ಹೌಸ್ಗೆ ಭೇಟಿ ನೀಡಿದ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆಗೆ ಪೂರಕ ಅಂದಾಜುವೆಚ್ಚ ನಿಗದಿಪಡಿಸಲಾಗಿದ್ದು, ಮುಂದಿನ ತಿಂಗಳಲ್ಲೇ ಟೆಂಡರ್ ನೀಡಲಾಗುವುದು. ಅದಕ್ಕೆ ಸಂಬಂಧಪಟ್ಟ ದಾಖಲೆ ಮುಂತಾದ ಪ್ರಕ್ರಿಯೆ ನಡೆಯಲಿದೆ ಎಂದರು.ಶಿರಾಡಿ ಘಾಟಿ ರಸ್ತೆಯ ಮೊದಲ ಹಂತದ ಕಾಮಗಾರಿ 2015ರ ಎ. 20ಕ್ಕೆ ಆರಂಭವಾಗಿ ಆಗಸ್ಟ್ನಲ್ಲಿ ಮುಗಿದು ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು. ಪ್ರಥಮ ಹಂತದಲ್ಲಿ 11.77 ಕಿ.ಮೀ. ಉದ್ದ ಹಾಗೂ 8.50 ಮೀ. ಅಗಲದಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆಗೆ ಕಾಂಕ್ರೀಟೀಕರಣವನ್ನು ಒಟ್ಟು 69.90 ಕೋ.ರೂ. ವೆಚ್ಚದಲ್ಲಿ ಕೈಗೊಂಡು ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿತ್ತು.
ಶಿರಾಡಿ ಘಾಟಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 13 ಕಿ.ಮೀ. ಉದ್ದದ, ಒಟ್ಟು 89 ಕೋ. ರೂ. ವೆಚ್ಚದ ದ್ವಿತೀಯ ಹಂತದ ರಸ್ತೆ ಕಾಮಗಾರಿಗೆ ಕೇಂದ್ರ ಹೆದ್ದಾರಿ ಸಚಿವಾಲಯದ ಅನುಮೋದನೆ ದೊರಕಿತ್ತಾದರೂ ನಿಗದಿತ ಸಮಯದಲ್ಲಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕಾಗಿ ನೂತನ ಟೆಂಡರ್ ಪ್ರಕ್ರಿಯೆ ಮುಂದಿನ ತಿಂಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.