ಮಂಗಳೂರು:ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್ನ ಕರೆನ್ಸಿ ಚೆಸ್ಟ್ ನಿಂದ 7.5 ಕೋಟಿ ನಗದು ಹಣವನ್ನು ಬೆಂಗಳೂರಿನ ಕೋರಮಂಗಲದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಸಾಗಿಸುತ್ತಿದ್ದ ನಾಲ್ವರು ಸಿಬ್ಬಂದಿಗಳು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ. ಮೇ 11 ರಂದು ಸಿಸ್ ಪ್ರೊಸೆಗೂರ್ ಹೋಲ್ಡಿಂಗ್ಸ್ ಸಂಸ್ಥೆಯ ಕಸ್ಟೋಡಿಯನ್ ಪರಶುರಾಮ, ಚಾಲಕ ಕರಿಬಸವ ಮತ್ತು ಗನ್ ಮ್ಯಾನ್ಗಳಾದ ಬಸಪ್ಪ ಮತ್ತು ಪೂವಣ್ಣ ಅವರು ತೆರಳಿದ್ದರು. ಆದರೆ ಇದುವರೆಗೆ ಬ್ಯಾಂಕ್ಗೆ ತಲುಪದೆ ನಾಪತ್ತೆಯಾಗಿದ್ದಾರೆ.
ಆಕ್ಸಿಸ್ ಬ್ಯಾಂಕ್ನ ಹಣ ಸಾಗಣೆ ಗುತ್ತಿಗೆ ಪಡೆದಿರುವ ಕೊಂಚಾಡಿಯ ಸಿಸ್ ಪ್ರೊಸೆಗೂರ್ ಹೋಲ್ಡಿಂಗ್ಸ್ ಸಂಸ್ಥೆಯ ಕಸ್ಟೋಡಿಯನ್ ಕಂಪೆನಿಯ ನಾಲ್ವರು ನೌಕರರು ಗುರುವಾರ (ಮೇ 11) ಬೆಳಿಗ್ಗೆ ಬೊಲೆರೋ ವಾಹನದಲ್ಲಿ 7.5 ಕೋಟಿ ನಗದನ್ನು ಯೆಯ್ಯಾಡಿ ಕರೆನ್ಸಿ ಚೆಸ್ಟ್ ನಿಂದ ತುಂಬಿಸಿಕೊಂಡು ಬೆಂಗಳೂರಿಗೆ ಹೊರಟಿದ್ದರು.ಮೇ 12 ಶುಕ್ರವಾರ ಬೆಳಿಗ್ಗೆಯವರೆಗೂ ಅವರು ಕೋರಮಂಗಲ ಶಾಖೆಗೆ ಹಣ ತಲುಪಿಸಿರಲಿಲ್ಲ. ಹಣ ತುಂಬಿಸಿಕೊಂಡು ಹೋಗಿದ್ದ ವಾಹನ ಶುಕ್ರವಾರ ಸಂಜೆ ವೇಳೆಗೆ ಹುಣಸೂರು ತಾಲ್ಲೂಕಿನ ಅರಸು ಕಲ್ಲಹಳ್ಳಿಯಲ್ಲಿ ಪತ್ತೆಯಾಗಿದೆ.
ಹಣ ಸಾಗಿಸುತ್ತಿದ್ದ ನಾಲ್ವರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ಸಫಲವಾಗಿಲ್ಲ. ವಾಹನ ಮತ್ತು ಅದರಲ್ಲಿದ್ದ ನೌಕರರಿಗಾಗಿ ಶೋಧಕಾರ್ಯ ಆರಂಭಿಸಲಾಗಿದೆ. ವಾಹನವನ್ನು ವಶಕ್ಕೆ ಪಡೆಯಲು ಕಂಕನಾಡಿ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿನಾಯ್ಕ್ ನೇತೃತ್ವದ ತಂಡ ಅರಸು ಕಲ್ಲಹಳ್ಳಿಗೆ ಹೊರಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.