ಉಜಿರೆ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತು ಪಡಿಸಿ ಹೆಚ್ಚಿನ ಕಡೆಗಳಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಆತಂಕದಲ್ಲಿವೆ ಎಂದು ಮುಂಡಾಜೆಯ ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಲ್ಲಿ ರಬ್ಬರು ಭವನದಲ್ಲಿ ಬೆಂಗಳೂರಿನ ಸೆಲ್ಕೋ ಸೋಲಾರ್ ಲೈಟ್ ಹಾಗೂ ಮಂಗಳೂರಿನ ಸುಶೀಲಾ ಮತ್ತು ಆರ್. ಎನ್. ಭಿಡೆ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾದ ಸೌರಶಕ್ತಿ ಉಪಕರಣ ಮತ್ತು ಸಾಲ ನೀಡುವಿಕೆ ಬಗ್ಯೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೊಸ ನಿಯಮಾವಳಿ ಹಾಗೂ ಕಾನೂನು ಜಾರಿಯಿಂದಾಗಿ ಸರ್ಕಾರಕ್ಕೆ ಸಹಕಾರಿ ಸಂಘಗಳ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪರಿಸರ ಪ್ರೇಮ ಹಾಗೂ ಸಹಕಾರಿ ರಂಗದಲ್ಲಿ ಪ್ರಾಮಾಣಿಕ ಸೇವೆ ಮಾಡಿದ ದಿವಂಗತ ಆರ್.ಯನ್. ಭಿಡೆ ಜನ್ಮ ಶತಮಾನೋತ್ಸವ ಅಂಗವಾಗಿ ಸೌರಶಕ್ತಿ ಉಪಕರಣ ವಿತರಿಸುವುದು ಔಚಿತ್ಯಪೂರ್ಣವಾಗಿದೆ ಎಂದು ಹೇಳಿ ಅವರು ಶುಭ ಹಾರೈಸಿದರು.
ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳು ಸಮಾಜಮುಖಿಯಾಗಿ, ರೈತ ಕೇಂದ್ರೀಕೃತವಾಗಿ ಕೆಲಸ ಮಾಡಬೇಕು. ರೈತರಿಗೆ ತರಬೇತಿ ನೀಡಿ ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ನೀರಾವರಿ ಸದುಪಯೋಗದ ಬಗ್ಯೆ ಮಾರ್ಗದರ್ಶನ ನೀಡಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ನೀಡುವುದರಿಂದ ಯಾವುದೇ ರೀತಿಯ ಭಯ, ಆತಂಕ ಪಡಬೇಕಾಗಿಲ್ಲ. ಇದೇ ಜೂನ್ 30ರೊಳಗೆ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರಕೃತಿದತ್ತವಾದ ಸೌರಶಕ್ತಿಯನ್ನು ಬಳಸಿ ರೈತರು ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು. ದ.ಕ. ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಸೆಲ್ಕೋ ಸೋಲಾರ್ ಘಟಕದ ಉಪ ಮಹಾಪ್ರಬಂಧಕ ಜಗದೀಶ್ ಪೈ ಸೌರಶಕ್ತಿ ಬಳಕೆಯ ಮಹತ್ವವನ್ನು ವಿವರಿಸಿದರು.
20 ಮಂದಿ ಅರ್ಹ ಫಲಾನುಭವಿಗಳಿಗೆ ಸೌರಶಕ್ತಿ ಉಪಕರಣಗಳನ್ನು ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ ರಬ್ಬರು ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಮಾತನಾಡಿ, ಸಹಕಾರಿ ಸಂಘಗಳು ರೈತರ ಆಪ್ತ ಮಿತ್ರನಾಗಿದ್ದು ಅವರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ನೀಡುತ್ತವೆ. ಜನಮಾನಸದ ಅವಿಭಾಜ್ಯ ಅಂಗವಾಗಿದ್ದು, ಭರಸವಸೆಯ ಕೇಂದ್ರಗಳಾಗಿವೆ ಎಂದರು.
ರಬ್ಬರು ಸೊಸೈಟಿ ಉಪಾಧ್ಯಕ್ಷ ಎನ್. ಪದ್ಮನಾಭ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಕೊನೆಯಲ್ಲಿ ಧನ್ಯವಾದವಿತ್ತರು. ಸೆಲ್ಕೋದ ಸಹಾಯಕ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಸೌರ ಉಪಕರಣಗಳ ಬಳಕೆ ಬಗ್ಯೆ ಮಾಹಿತಿ ಮತ್ತು ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು