ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ದಾವಣಗೆರೆ ಜಿಲ್ಲೆ ಹರಿಹರದ ಮಂಜುನಾಥ (49) ತೀವ್ರ ಅಸ್ವಸ್ಥಗೊಂಡು ಶುಕ್ರವಾರ ಬೆಳಗ್ಗಿನ ಜಾವ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಎರಡು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದ ಈತ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾನೆ.
ಈತ ಬಿಜೈ ಕಾಪಿಕಾಡ್ನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತ ಆ ಮನೆಯಿಂದ ಚಿನ್ನ ಕಳವು ಮಾಡಿದ ಆರೋಪ ಹೊತ್ತು ಪರಾರಿಯಾಗಿದ್ದ. ಉರ್ವ ಪೊಲೀಸರು ಆತನನ್ನು ಒಂಬತ್ತು ತಿಂಗಳ ಹಿಂದೆ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಅಲೆಮಾರಿಯಾಗಿ ತಿರುಗುತ್ತಿದ್ದ ಈತ ಮನೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.ಕೆಲವು ದಿನಗಳ ಹಿಂದೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಇನ್ನೋರ್ವ ವಿಚಾರಣಾಧೀನ ಕೈದಿ ಬಿಜು ಯಾನೆ ಜೋಸ್ ಕಾರಾಗೃಹದಲ್ಲಿ ಅತಿಯಾಗಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈತ ರೈಲಿನಲ್ಲಿ ಕಳವು ಪ್ರಕರಣದ ಆರೋಪಿಯಾಗಿದ್ದನು.