ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ಪೊಳ್ಳು ಭರವಸೆಯೇ ಕೇಂದ್ರ ಸರಕಾರದ ಸಾಧನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಬಗ್ಗೆಯೂ ಅಪಸ್ವರ ಎತ್ತಲಾಗಿತ್ತು. ಇದೀಗ ಎಲ್ಲದಕ್ಕೂ ಆಧಾರ್ ಕಡ್ಡಾಯವಾಗಿದೆ.
ದೇಶದ ಹಿತದೃಷ್ಟಿಯಿಂದ ಯುಪಿಎ ಕೈಗೊಂಡ ಯೋಜನೆಗಳಿಗೆ ಈ ಹಿಂದೆ ವಿಪಕ್ಷವಾಗಿದ್ದ ಎನ್ಡಿಎ ವಿರೋಧ ಮಾಡುತ್ತಲೇ ಬಂದಿತ್ತು. ಈಗ ಅವುಗಳನ್ನೇ ಮುಂದುವರಿಸುತ್ತಿದೆ ಎಂದರು.ಕೈಗಾರಿಕಾ ಉತ್ಪಾದನಾ ಕೋಷ್ಠಕ (ಐಐಪಿ)ದ ಅಂಕಿ ಅಂಶಗಳನ್ನೇ ಆಧರಿಸಿ ಹೇಳುವುದಾದರೆ ಜನವರಿಯಲ್ಲಿ ಶೇ 3 ಇದ್ದ ಸಾಂಪ್ರದಾಯಿಕ ಉತ್ಪಾದನಾ ವಲಯದ ವೃದ್ಧಿ ದರ, ಫೆಬ್ರವರಿಯಲ್ಲಿ ಶೇ 1.4ಕ್ಕೆ ಇಳಿದಿದೆ. ಮಾರ್ಚ್ನಲ್ಲಿ ಇದು ಶೇ. 1.2ಕ್ಕೆ ಇಳಿಕೆಯಾಗಿದೆ. ಉತ್ಪಾದನಾ ದರ ಕುಸಿಯುವುದರಿಂದ ಸಹಜವಾಗಿಯೇ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ಕಾಶ್ಮೀರ ಸಮಸ್ಯೆಗೂ ನೋಟು ರದ್ದತಿಯಿಂದ ಪರಿಹಾರ ದೊರಕಲಿದೆ ಎಂದು ಹೇಳಿಕೊಳ್ಳಲಾಯಿತು. ಆದರೆ ಎರಡು ದಶಕಗಳಲ್ಲಿ ಕಾಣದ ಪ್ರಕ್ಷುಬ್ಧ ಸ್ಥಿತಿ ಇಂದು ಕಾಶ್ಮೀರವನ್ನು ಕಾಡುತ್ತಿದೆ. ನೋಟು ರದ್ದತಿಯಿಂದ ನಕ್ಸಲಿಸಂ ಸಂಪೂರ್ಣ ನಾಶವಾಗುತ್ತದೆ ಎಂದು ಹೇಳಲಾಯಿತು. ಯಾವುದೂ ಆಗಲಿಲ್ಲ ಎಂದು ಆರೋಪಿಸಿದರು.ಈ ಸಂದರ್ಭ ಶಾಸಕ ಜೆ.ಆರ್.ಲೋಬೊ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.