ಮಂಗಳೂರು: ದ.ಕ.ಜಿಲ್ಲೆಯ ಕಲ್ಲಡ್ಕದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂದು ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ, ಬಂಟ್ವಾಳ ತಾಲೂಕಿನಾದ್ಯಂತ ಮೇ 27ರ (ಶನಿವಾರ) ಬೆಳಗ್ಗೆ 9 ಗಂಟೆಯಿಂದ ಜೂನ್ 2ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಉಪವಿಭಾಗ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಯುವಕರಿಬ್ಬರ ಮೇಲೆ ಚೂರಿ ಇರಿತ ಪ್ರಕರಣ ನಡೆದ ಸಂಬಂಧ ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ 'ಕಲ್ಲಡ್ಕ ಬಂದ್' ಸಂದೇಶದ ಪರಿಣಾಮವಾಗಿ ಶನಿವಾರ ಕಲ್ಲಡ್ಕ ಭಾಗಶಃ ಬಂದ್ ಆಗಿತ್ತು.ಕಲ್ಲಡ್ಕ ಪೇಟೆ ಮತ್ತು ಸುತ್ತಮುತ್ತ ಅಂಗಡಿಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಈ ಮಧ್ಯೆ ಬಂದ್ ಗೆ ಪರ, ವಿರೋಧ ವ್ಯಕ್ತವಾಗಿದ್ದರಿಂದ ಕಲ್ಲಡ್ಕದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡದಂಥ ಸನ್ನಿವೇಶ ಇದೆ.