ಮಂಗಳೂರು: ಕಲ್ಲಡ್ಕದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಸೆಕ್ಷನ್ 144 ನಿಷೇಧಾಜ್ಞೆಯ ಮಧ್ಯೆಯೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಕಲ್ಲಡ್ಕದ ರತ್ನಾಕರ್ ಶೆಟ್ಟಿ ಎಂಬುವರಿಗೆ ಚೂರಿಯಲ್ಲಿ ಇರಿಯಲಾಗಿದೆ. ಮಂಗಳವಾರ ಸಂಜೆ ಖಲೀಲ್ ಹಾಗೂ ರತ್ನಾಕರ್ ಶೆಟ್ಟಿ ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಿಣಾಮ ಘಟನಾ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನೆಡದಿದ್ದು ಕಲ್ಲಡ್ಕದ ರಾಮಮಂದಿರ ಹಾಗೂ ಮಸೀದಿಗೆ ಕಲ್ಲು ಎಸೆದಿದ್ದಾರೆ.ಪೋಲೀಸರ ಎದುರಲ್ಲೇ ಗುಂಪುಗಳು ಹೊಡೆದಾಟ ನಡೆಸಿದ್ದು, ಇದರಿಂದ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.
ಚೂರಿ ಇರಿತಕ್ಕೆ ಒಳಗಾದ ರತ್ನಾಕರ್ ಶೆಟ್ಟಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಹಲವು ತಂಡಗಳಲ್ಲಿ ಶೋಧ ನಡೆಸುತ್ತಿದ್ದಾರೆ.ಚೂರಿ ಇರಿತದ ವಿಷಯ ತಿಳಿಯುತ್ತಿದ್ದಂತೆ ಕಲ್ಲಡ್ಕ ಪಟ್ಟಣದಲ್ಲಿ ಜನ ಜಮಾಯಿಸಿದ್ದಾರೆ. ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಮುಂಜಾಗೃತ ಕ್ರಮವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಹಾಗೂ ಅವರ ಸಿಬ್ಬಂದಿ ದೌಡಾಯಿಸಿ ಬಂದೋಬಸ್ತ್ ಕಲ್ಪಿಸಿದ್ದಾರೆ.ಇನ್ನು ಇತ್ತೀಚಿಗಷ್ಟೇ ಜುಮಾ ನಮಾಝ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮೂವರು ಮುಸ್ಲಿಂ ಯುವಕರ ಮೇಲೆ ಮೂವರು ಹಿಂದೂ ಯುವಕರು ಹಲ್ಲೆ ನಡೆಸಿ, ಒಬ್ಬನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಈ ಹಿನ್ನಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಇದೀಗ ಇದರ ಮಧ್ಯೆಯೇ ಹೊಡೆದಾಟ ನಡೆದಿದೆ.