ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಭರತನಾಟ್ಯ ಕಲಿಯುತಿರುವ ಕು| ಸ್ಮೃತಿ ದಯಾನಂದ್ ಶೆಣೈ ಭರತನಾಟ್ಯ ರಂಗ ಪ್ರವೇಶ 2017 ಜುಲೈ 9 ರಂದು ಕರ್ನಾಟಕದ ಕಡಲತೀರದ ಉಡುಪಿಯಲ್ಲಿರುವ ಎಂ.ಜೆ.ಎಂ. ಕಾಲೇಜಿನ ರವೀಂದ್ರ ಕಲಾಮಂಟಪದಲ್ಲಿ ಸಂಜೆ ಐದು ಗಂಟೆಯಿಂದ ನಡೆಯಲಿದೆ.
ಯು.ಎ.ಇ.ಯಲ್ಲಿರುವ " ಕ್ಲಾಸಿಕಲ್ ರಿದಂಸ್" ಕಲಾಸಂಸ್ಥೆಯ ಮುಖ್ಯಸ್ಥೆ ವಿದೂಷಿ ರೋಹಿಣಿ ಅನಂತ್ ಶಿಷ್ಯೆಯಾಗಿರುವ ಕು| ಸ್ಮೃತಿ ಶೆಣೈ ಭರತನಾಟ್ಯ ರಂಗಪ್ರವೇಶ ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ, ನಿರ್ದೇಶಕರು, ನಟರಾದ ಶ್ರೀ ಕಾಸರಗೋಡು ಚಿನ್ನಾ, ವಿದೂಷಿ ಮಾನಸಿ, ಕೊಡವೂರು ನೃತ್ಯನಿಕೇತನಾ ಸ್ಥಾಪಕ ನಿರ್ದೇಶಕರು ವಿದ್ವಾನ್ ಸುಧೀರ್ ರಾವ್ ಭಾಗವಹಿಸಲಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಶ್ರೀಮತಿ ದೀಪಾ ಶೆಣೈ ಹಾಗೂ ಶ್ರೀ ದಯಾನಂದ್ ಶೆಣೈ ದಂಪತಿಗಳ ಪ್ರಥಮ ಪುತ್ರಿ ಕು| ಸ್ಮೃತಿ ಶೆಣೈ ಶಾರ್ಜದಲ್ಲಿರುವ ಅವರ್ ಹೋನ್ ಗರ್ಲ್ಸ್ ಹೈಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾಳೆ. ಪಠ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿಯೊಂದಿಗೆ ಭರತನಾಟ್ಯ, ಚಿತ್ರಕಲೆ, ಸಂಗೀತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ.
ತನ್ನ ಐದನೆಯ ವಯಸ್ಸಿನಲ್ಲೇ ಭರತನಾಟ ಅಭ್ಯಾಸಕ್ಕೆ ಪಾದರ್ಪಣೆ ಮಾಡಿದ್ದು ಶಾರ್ಜಾದಲ್ಲಿರುವ ಸಿಂಫೋನಿ ಮ್ಯೂಸಿಕ್ ಇನಿಸ್ಟಿಟ್ಯೂಟ್ ನಲ್ಲಿ ಗುರು ಶಕ್ತಿ ಮೊದಲ ಗುರುವಾಗಿದ್ದಾರೆ. ನಂತರ 2012 ರಿಂದ ಕ್ಲಾಸಿಕಲ್ ರಿದಂಸ್ ನ ವಿದೂಷಿ ರೋಹಿಣಿ ಅನಂತ್ ರವರ ತಪೋಭೂಮಿಯಲ್ಲಿ ತನ್ನ ಶಾಸ್ತ್ರೀಯ ನೃತ್ಯ ಅಭ್ಯಾಸ ಮುಂದುವರೆಸಿಕೊಂಡು ಬರುತಿದ್ದಾಳೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಮತ್ತು ಕರ್ನಾಟಕ ಪರ ಸಂಘಟನೆಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಅದ್ಧೂರಿಯಾಗಿ ನಡೆದ ವಿಶ್ವಕನ್ನಡ ಸಮ್ಮೇಳನ, ಕರ್ನಾಟಕ ರಾಜ್ಯೋತ್ಸವ, ಭಾರತೀಯ ದೂತವಾಸ ಕಛೇರಿಯ ರಂಗ ಮಂದಿರಗಳಲ್ಲಿ ರಾಷ್ಟ್ರೀಯ ಹಬ್ಬಗಳು, ಇನ್ನಿತರ ಪ್ರಮುಖ ಸಮಾರಂಭಗಳಲ್ಲಿ ತನ್ನ ಅದ್ಭುತ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಪ್ರೇಕ್ಷಕರ ಮನ ಸೆಳೆದಿದ್ದಾಳೆ.
ಭಾರತೀಯ ಶ್ರೀಮಂತ ಕಲೆ ನಾಟ್ಯಶಾಸ್ತ್ರದಲ್ಲಿ ಶಾಸ್ತ್ರೀಯವಾಗಿ ಅಭ್ಯಾಸವನ್ನು ಮಾಡಿ ಇದೀಗ ಭರತನಾಟ್ಯ ರಂಗ ಪ್ರವೇಶ (ಅರಂಗೆಟ್ರಂ) ಮೂಲಕ ಶಾಸ್ತ್ರೀಯ ಭರತನಾಟ್ಯ ಕಲಾವಿದೆಯಾಗಿ ಭಾರತೀಯ ಕಲಾಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಸೇತುವೆಯಾಗಲಿದ್ದಾಳೆ.
ಕಲಾದೇವಿಯ ಉಪಾಸನೆಯಲ್ಲಿ ಮುನ್ನಡೆಯ ಹೆಜ್ಜೆಗಳನ್ನಿಡುವ ನಮ್ಮೆಲ್ಲರ ನೆಚ್ಚಿನ ಕಿರಿಯ ಕಲಾವಿದೆ ಕು| ಸ್ಮೃತಿ ಶೆಣೈ ಕಲಾ ಗುರು ಕೊಲ್ಲಿನಾಡಿನ ಸಾಂಸ್ಕೃತಿಕ ಕಲಾ ರಾಯಬಾರಿ ವಿದೂಷಿ ಶ್ರೀಮತಿ ರೋಹಿಣಿ ಅನಂತ್ ರೋಹಿಣಿ ಅನಂತ್ ದುಬಾಯಿಯ ಪರಿಸರದಲ್ಲಿ ಆಸಕ್ತ ಮಕ್ಕಳನ್ನು ಒಟ್ಟುಮಾಡಿ " ಕ್ಲಾಸಿಕಲ್ ರಿದಂಸ್" ತಂಡವನ್ನು ರಚಿಸಿ ಹಲವಾರು ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಇದೇ ಅವಧಿಯಲ್ಲಿ ತಮ್ಮ ಕಲಾಪ್ರತಿಭೆಗೆ ಗುರುಗಳಾದ ಶ್ರೀಮತಿ ರಾಜಲಕ್ಷ್ಮಿ, " ಪಂಡನಲ್ಲೂರು ಶೈಲಿ" ಪ್ರಸಿದ್ದಿ, ಗುರು ಶ್ರೀಮತಿ ರೇವತಿ ನರಸಿಂಹನ್, ಗುರು ಶ್ರೀಮತಿ ಲಲಿತಾ ಶ್ರೀನಿವಾಸನ್ - ಮೈಸೂರು ಶೈಲಿ, ಗುರು ಶ್ರೀಮತಿ ಪದ್ಮಿನಿ ರವಿ ವಳುವೂರ್ ಶೈಲಿಗಳ ಮೆರಗು ಸೇರಿಸಿ ತನ್ನಲ್ಲಿರುವ ನೃತ್ಯ ಕಲೆಗೆ ಹೆಚ್ಚಿನ ಮಹತ್ವದೊಂದಿಗೆ ಹಲವಾರು ನೃತ್ಯ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ರೋಹಿಣಿ ಅನಂತ್ ರವರ ಕನಸಿನ ಕಲ್ಪನೆಯ ನೃತ್ಯ ಶಾಲೆ " ಸ್ವರಾಲಯ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್" 1996 ರಲ್ಲಿ ಪ್ರಾರಂಭಗೊಂಡು ನೂರಾ ಐವತ್ತಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಭೇತಿ ನೀಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು " ವಿಧ್ವತ್" ಪರೀಕ್ಷೆಯನ್ನು ಮುಗಿಸಿದ್ದಾರೆ. ಭಾರತಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದ ಕೀರ್ತಿ ಇವರದ್ದು.
ರೋಹಿನಿ ಅನಂತ್ ರವರು ನೃತ್ಯ ಪರಿವೀಕ್ಷಕರಾಗಿ ಕರ್ನಾಟಕ ಪರೀಕ್ಷಾ ಮಂಡಳಿ, ಬೆಂಗಳೂರು ನಡೆಸುವ ನೃತ್ಯ ಪರೀಕ್ಷೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ನೃತ್ಯ ಕಾರ್ಯಗಾರಗಳಲ್ಲಿ ನೃತ್ಯದ ಬಗ್ಗೆ ಮಾಹಿತಿ, ತರಭೇತಿ, ವ್ಯಾಯಾಮ, ನಟುವಾಂಗದ ಮೂಲಕ ನೃತ್ಯ ರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ವಿದೂಷಿ ರೋಹಿಣಿ ಅನಂತ್ ರವರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು ರೋಹಿಣಿ ಅನಂತ್ ರವರ ಕಲಾ ಸಾಧನೆಗೆ ಹಾಗೂ ಕೊಲ್ಲಿನಾಡಿನಲ್ಲಿ ಸಲ್ಲಿಸಿ ಸಾಂಸ್ಕೃತಿಕ ಸಾಧನೆಗೆ
* ಕರ್ನಾಟಕ ರಾಜ್ಯ ಸರ್ಕಾರದ - ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
* ದುಬಾಯಿಯಲ್ಲಿ - ಎಕ್ಸ್ಲೆನ್ಸ್ ಅವಾರ್ಡ್ ಫಾರ್ ಡ್ಯಾನ್ಸ್ ಪ್ರಶಸ್ತಿ
* ಕೇರಳಾ ರಾಜ್ಯ ಪ್ರಶಸ್ತಿ
* 2013 ರಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ,
* ವಿದೇಶದಲ್ಲಿ ಭಾರತೀಯ ಕಲೆಯ ಅನಾವರಣದ ಸಾಧನೆಗೆ “ಚಾಣಕ್ಯ ಪ್ರಶಸ್ತಿ’,
* ಕಥಕ್ ಮಹೋತ್ಸವದಲ್ಲಿ “ನೃತ್ಯ ರತ್ನ ಪ್ರಶಸ್ತಿ”
ಗುರು ವಿಧೂಷಿ ರೋಹಿಣಿ ಅನಂತ್ ರವರ ಶಿಷ್ಯೆ ಕು| ಸ್ಮೃತಿ ಶೆಣೈ ತನ್ನ ಅವಿರತ ಅಭ್ಯಾಸದ ಮೂಲಕ ಪರಿಣಿತಿಯನ್ನು ಪಡೆದು ಕಲಾದೇವಿಯ ಅನುಗ್ರಹ ಪಡೆದು ಭರತನಾಟ್ಯ ರಂಗಪ್ರವೇಶಕ್ಕೆ ತಯಾರಾಗುತಿರುವ ಶುಭ ಸಂದರ್ಭಕ್ಕೆ ಅನಿವಾಸಿ ಕನ್ನಡಿಗರ ಪರವಾಗಿ ಶುಭಹಾರೈಕೆಗಳು.