(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.17: ಸಂಸ್ಕೃತಿ ಉಳಿವು ಒಬ್ಬಿಬ್ಬರು ಮಾಡುವ ಕೆಲಸವಲ್ಲ. ಮುಖ್ಯವಾಗಿ ಎಳವೆಯಲ್ಲಿ ಮಕ್ಕಳಿಗೆ ನಮ್ಮ ನೈಜ್ಯ ಸಂಸ್ಕೃತಿಯನ್ನು ಬೋಧಿಸಿ ಪ್ರೇರೆಪಿಸಬೇಕು. ಮನೆಮಂದಿಗಳೇ ಮಕ್ಕಳಿಗೆ ಸಂಸ್ಕೃತಿ ಬಗ್ಗೆ ಅನುಭವ ಕೊಡುತ್ತಿಲ್ಲ. ಪಾಲಕರಲ್ಲಿ ಮಕ್ಕಳನ್ನು ಬರೇ ಡಾಕ್ಟರ್, ಇಂಜಿನೀಯರ್ಗಳಾಗಿಸುವ ದೂರದೃಷ್ಟಿ, ಕನಸುಗಳಿವೆ ಹೊರತು ನಮ್ಮ ಪರಂಪರಿಕಾ ಸಂಸ್ಕೃತಿ, ಸಂಸ್ಕಾರದ ಅರಿವು ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಆದರೂ ಭಾರತೀಯ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ ಎನ್ನುವುದು ಬರೀ ಕಲ್ಪನೆಯಾಗಿದ್ದು ನಮ್ಮ ಸಂಸ್ಕೃತಿ ಸದ್ಯ ವಿಶ್ವಕ್ಕೆ ಅನುಕರಣೀಯವಾಗಿದೆ. ಇಂತಹ ಪಾವಿತ್ರ್ಯತೆಯ ಸಂಸ್ಕೃತಿ ಸಂರಕ್ಷಣೆಗೆ ಪಾಲಕರ ಪ್ರೇರಣೆ ಅವಶ್ಯ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ನುಡಿದರು.
ಮಹಾನಗರದ ಮಾಟುಂಗಾ ಪೂರ್ವದಲ್ಲಿನ ಶ್ರೀ ಶಂಕರ ಮಠದಲ್ಲಿ 57ನೇ ವಾರ್ಷಿಕ ಚಾತುರ್ಮಾಸ್ಯ ವೃತ ಆಚರಿಸುತ್ತಿರುವ ಅದ್ವೈತ ವೇದಾಂತ ತತ್ವಜ್ಞಾನಿ, ಶ್ರೀ ಈಶ್ವರಾನಂದ ಭಾರತೀ ಸ್ವಾಮಿಜಿ ಪಟ್ಟಶಿಷ್ಯ, ಕಾಸರಗೋಡು ಅಲ್ಲಿನ ಎಡನೀರು ಮಠದ ಶ್ರೀಮದ್ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯ ಥೋಟಕಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಶ್ರೀಪಾದರು ಇಂದಿಲ್ಲಿ ಭಾನುವಾರ ಮಧ್ಯಾಹ್ನ ಶಂಕರ ಮಠದಲ್ಲಿ ತಮ್ಮ ಆರಾಧ್ಯ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ನೆರೆದ ಭಕ್ತಾಭಿಮಾನಿಗಳು ಮತ್ತು ಶಿಷ್ಯವೃಂದನ್ನು ಹರಸಿ ಮಾತನಾಡಿದರು.
ಗುರುಹಿರಿಯರಲ್ಲಿ ಹೇಗಿರಬೇಕು ಎನ್ನುವ ಕನಿಷ್ಠ ಜ್ಞಾನವನ್ನೂ ಹೇಳಿಕೊಡುವ ಪಾಲಕರು ಕಡಿಮೆಯಾಗಿದೆ. ಯಾರು ಆ ಬಗ್ಗೆ ಆಸಕ್ತಿಯೂ ವಹಿಸುತ್ತಿಲ್ಲ. ಮೊದಲಾಗಿ ದೊಡ್ದವರು ಆಸಕ್ತಿ ವಹಿಸಿ ಬೆಳೆಸಬೇಕು. ಭಾರತೀಯ ಆಹಾರ ಪದ್ಧತಿ ಶಾಸ್ತ್ರೋಕ್ತವಾಗಿ ಮುನ್ನಡೆದು ಬಂದಿದೆ. ಮಹಾಹಿಂಸೆ ಅದು ಸರ್ವ ಭೂತಾಹ. ಪ್ರಕೃತಿ, ಪ್ರಪಂಚದ ಯಾವುದೇ ಪ್ರಾಣಿ ಪಕ್ಷಿಗಳ ಹಿಂಸೆ ಮಹಾಪಾಪ. ಆದರೆ ಇವತ್ತು ಮನುಷ್ಯರನ್ನೇ ಪ್ರಾಣಿಗಳಿಗಿಂತ ಕಡೆಯಾಗಿಸಿ ಹಿಂಸಿಸಿ ಹತ್ಯೆಗೈಯುವ ಇಂತಹ ಧೋರಣೆ, ಸ್ಥಿತಿಯಲ್ಲಿರುವಾಗ ನಿರ್ಧಿಷ್ಟ ಆಹಾರ ಪದ್ಧತಿಕ್ಕಿಂತ ಸಾಮರಸ್ಯದ ಬದುಕನ್ನು ಪ್ರೇರೆಪಿಸುವುದು ಅವಶ್ಯವಾಗಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಳೇ ಮಾನದಂಡವಾಗಿರುವುದು ಭಾರತೀಯರ ದುರದೃಷ್ಟ. ಶಾಸಕ, ಮಂತ್ರಿ, ಹುದ್ದೆಗಳ ಸ್ಥಾನಕ್ಕೆನೇ ಜಾತಿಯೇ ಆದ್ಯತೆ ಅಂದಮೇಲೆ ಜಾತ್ಯಾತೀತ ರಾಷ್ಟ್ರದ ಪ್ರೆಶ್ನೆ ಎಲ್ಲಿ ಉಳಿದಿದೆ. ಜಾತ್ಯಾತೀತ ಬರೇ ವೇದಿಕೆಯ ಭಾಷಣಕ್ಕೆ ಸೀಮಿತವಾಗಿದೆ. ಆದ ಕಾರಣ ಆಚರಣೆಯಲ್ಲಿ ಇಲ್ಲದ ವಿಚಾರಗಳು ಎಲ್ಲವನ್ನೂ ಶೂನ್ಯಗೊಳಿಸುತ್ತವೆ ಜೀವನವನ್ನು ಸುಗಮವಾಗಿ ಸಾಗಿಸಬೇಕೆನ್ನುವುದೇ ಪ್ರತೀಯೋರ್ವರ ಉದ್ದೇಶವಾಗಿದೆ. ಇದು ಮಾನವನಲ್ಲಿ ಮಾತ್ರವಲ್ಲ ಸಾಮಾನ್ಯ ಪ್ರಾಣಿಗಳಲ್ಲೂ ಇರುವ ಚಿಂತನೆ. ಆದುದರಿಂದ ಪ್ರಪಂಚದ ಅರಿವು ಮೂಡಿಸಿ ಪರರಿಗೆ ಅನ್ಯಾಯವಾದ ರೀತಿಯಲ್ಲಿ ಜೀವನ ನಡೆಸುವುದು ಯೋಗ್ಯವಾಗಿರಲಿ ಎಂದು ಶ್ರೀಗಳು ಸಲಹಿಸಿದರು.
ಸರೋಜಾ ರಾಮಚಂದ್ರನ್ ಮತ್ತು ವಿಶಾಲಾಕ್ಷಿ ದಂಪತಿ ಶ್ರೀಗಳ್ಳ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎಡನೀರು ಮಠದ ವ್ಯವಸ್ಥಾಪಕ ಜಯರಾಮ ಕೆದ್ಲಾಯ, ಕಾರ್ಯದರ್ಶಿ ರಾಜೇಂದ್ರ ಕಲ್ಲೂರಾಯ, ಹಿರಿಯ ಸಾಹಿತಿ ಹೆಚ್. ಬಿ. ಎಲ್ ರಾವ್, ಮಾಳ ರಾಘವೇಂದ್ರ ಭಟ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಶಂಕರಾಚಾರ್ಯರ ಅನುಯಾಯಿ ಆಗಿದ್ದು 56 ವರ್ಷಗಳಿಂದ ಕಾಸರಗೋಡು ಮಧುವಾಹಿನಿ ನದಿ ತೀರದ ಎಡನೀರು ಮಠದ ಪೀಠಾಧಿಪತಿ ಆಗಿರುವ ಕೇಶವಾನಂದಶ್ರೀಗಳು ತನ್ನ ದಕ್ಷಿಣಮೂರ್ತಿ ಹಾಗೂ ಗೋಪಾಲಕೃಷ್ಣ ದೇವರ ಆರಾಧ್ಯಕರು. ನಾಟಕ ಪ್ರವೀಣರೂ, ಯಕ್ಷಗಾನ ಮೇಧಾವಿ ಆಗಿರುವ ಶ್ರೀಗಳು ಭಕ್ತಿ, ಭಜನೆ ಸಂಗೀತದ ನಿಸ್ಸೀಮಾರಾಗಿದ್ದು ಹಿಂದೂಸ್ಥಾನಿ ಗಾಯಕ ಸ್ವಾಮೀಜಿ ಎಂದೇ ಪ್ರಸಿದ್ಧರು. ಸಾಹಿತ್ಯ, ಸಂಸ್ಕೃತಿ ಪ್ರೀಯರಾಗಿದ್ದು ಅದರ ಉಳಿವಿಗಾಗಿ ಸದಾ ಸಕ್ರೀಯರಾಗಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ರೂಪಿಸಿದ ಅದ್ವೈತ ಕಲಾ ಪೆÇೀಷಕ, ಗುರುಗಳಾಗಿದ್ದಾರೆ. ಕೇರಳದಲ್ಲೂ ಕನ್ನಡ ವಿದ್ಯಾಮಂದಿರ ಸ್ಥಾಪಿಸಿ ಕನ್ನಢಾಂಭೆಯ ಶೈಕ್ಷಣಿಕ ಸೇವಾ ನಿರತರಾಗಿದ್ದಾರೆ.
ಶ್ರೀಗಳು ಬರುವ ಸೆ.06ರ ಭಾದ್ರಪದ ಹುಣ್ಣಿಮೆಯ ಪ್ರತಿಪತ್ ಶ್ರದ್ಧಾ ತನಕ ಶಂಕರ ಮಠದಲ್ಲಿದ್ದು ನಿತ್ಯ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಪೂಜೆಗಳನ್ನು ನೆರವೇರಿಸಿ ಭಕ್ತರಿಗೆ ಶ್ರೀಪಾದರು ಸ್ವಹಸ್ತದಿಂದ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ ಎಂದು ಎಡನೀರು ಮಠದ ರಾಜೇಂದ್ರ ಕಲ್ಲೂರಾಯ ತಿಳಿಸಿದ್ದಾರೆ.