ಬದುಕು ಸಂದೇಶ ಸಾರುವ ಚಿತ್ರವಾಗಿದೆ: ಹರೀಶ್ ಶೇರಿಗಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮಂಗಳೂರು, ಜು.20: `ಮಾರ್ಚ್ 22' ಕನ್ನಡ ಸಿನೆಮಾ ತುಂಬಾ ವಿಭಿನ್ನವಾದ ಕಮರ್ಷಿಯಲ್ ಆಗಿರದ ಬದುಕಿನ ದಿನಚರಿ ಸಂದೇಶ ಸಾರುವ ಚಿತ್ರವಾಗಿದೆ ಎಂದು ದುಬಾಯಿಯ ಹೆಸರಾಂತ ಉದ್ಯಮಿ, ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ತಿಳಿಸಿದರು.
ಇಂದಿಲ್ಲಿ ಬುಧವಾರ ಸಂಜೆ ನಗರದ ಮೋತಿಮಹಲ್ ಸಭಾಗೃಹದಲ್ಲಿ ತನ್ನ ಆಕ್ಮೆ (ಂಅಒಇ) ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರ್ನಡಿಯಲ್ಲಿ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ `ಮಾರ್ಚ್ 22' ಕನ್ನಡ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ ಕಾರ್ಯಕ್ರಮ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹರೀಶ್ ಶೇರಿಗಾರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಟರಾದ ಅನಂತ್ನಾಗ್, ಜೈ ಜಗದೀಶ್, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾಥಿರ್ü, ಗಾಯತ್ರಿ, ಆರ್ಯವರ್ಧನ್, ಕಿರನ್ ರಾಜ್, ಕು| ಮೇಘಾ ಕು| ದೀಪ್ತಿ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ನಾನು ಅನೇಕ ಸಿನೇಮಾಗಳನ್ನು ಹೊಟ್ಟೆಪಾಡಿಗೆ ಮಾಡಿದರೆ ಕೆಲವೊಂದನ್ನು ತೃಪ್ತಿಗಾಗಿ ಮಾಡಿರುವೆ. ಆ ಪಯ್ಕಿ `ಮಾರ್ಚ್ 22' ಚಿತ್ರವೊಂದಾಗಿದೆ. ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ರೀತಿಯ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದಾಗ್ಯೂ ಹಿಂದೂಗಳು ಮತ್ತು ಮುಸ್ಲೀಮರ ನಡುವಿನ ಸಂಬಂಧಕ್ಕೆ ಕೆಲವೊಮ್ಮೆ ಕೆಲವು ಪ್ರಚೋದನೆಗಳಿಂದಾಗಿ ಧಕ್ಕೆ ಬಂದಿರುವುದು ಕೂಡ ಸತ್ಯ. ದೇಶದ ಇತಿಹಾಸದಲ್ಲಿ ಇದು ದೊಡ್ಡ ಗಾಯದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರು ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 22 ಸಿನೆಮಾ ತಂಡ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಈ ಚಿತ್ರವು ಬರೇ ರಾಷ್ಟ್ರದಲ್ಲಿ ಮಾತ್ರವಲ್ಲ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ತಿಳಿಸಿದರು.
`ಮಾರ್ಚ್ 22' ಸಿನೇಮಾ ಮೂಲಕ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಲು ಈ ತಂಡ ಸಿದ್ಧತೆ ನಡೆಸಿದೆ. ಇಂಥ ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಸೌಹಾರ್ದತೆಯೊಂದಿಗೆ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಹರೀಶ್ ಶೇರಿಗಾರ್ ಅವರ ಂಅಒಇ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾ ಬಗ್ಗೆ ಕನ್ನಡ ಸಿನೆಮಾ ಪ್ರಿಯರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರುವ `ಮಾರ್ಚ್ 22' ಸಿನೇಮಾ ಬಗ್ಗೆ ಕನ್ನಡ ಸಿನಿಮಾಭಿಮಾನಿಗಳು ಬಹುನಿರೀಕ್ಷೆಯನ್ನಿಟ್ಟು ಕೊಂಡಿದ್ದು, ಸಿನೆಮಾ ಬಿಡುಗಡೆಗೂ ಮುನ್ನವೇ ಭಾರಿ ಸುದ್ದಿ ಮಾಡುತ್ತಿದೆ ಎಂದು ಹಿರಿಯ ನಟ ಅನಂತ್ನಾಗ್ತಿಳಿಸಿದರು.
ಚಿತ್ರ ನಿರ್ಮಾಪಕಿ ಶರ್ಮಿಳಾ ಹೆಚ್.ಶೇರಿಗಾರ್, ಡಾ| ಕೆ.ವಿ ದೇವಾಡಿಗ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪತ್ರಕರ್ತ ಮಹೋಹರ್ ಪ್ರಸಾದ್ ಸ್ವಾಗತಿಸಿ ವಂದಿಸಿದರು.
ತಾರಾಗಣದಲ್ಲಿ ಅನಂತ್ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾಥಿರ್ü, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ| ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಚಿತ್ರ ನಿರ್ಮಾಣ: ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್, ಕಥೆ-ಚಿತ್ರಕಥೆ-ನಿರ್ದೇಶನ: ಖ್ಯಾತ ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ, ಸಂಗೀತ ನಿರ್ದೇಶಕರು: ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್ ರಾಜಮಗ, ಹಿನ್ನೆಲೆ ಗಾಯಕರು: ಎಸ್.ಪಿ ಬಾಲಸುಬ್ರಹ್ಮಣ್ಯಂ, ಖೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್. ರಾಜಮಗ, ಅಕ್ಷತಾ ರಾವ್, ಛಾಯಾಗ್ರಾಹಣ: ಮೋಹನ್, ಸಂಭಾಷಣೆ: ಬಿ.ಎ.ಮಧು, ಸಂಕಲನ: ಬಸವರಾಜ್ ಅರಸ್, ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು-ಕುಂಗ್ಫು ಚಂದ್ರು ಹಾಗೂ ಮದನ್ ಹರಿಣಿ ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ.