ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರ ತವರು ಜಿಲ್ಲೆಯಲ್ಲೇ ಈಗ ಪಡಿತರ ಚೀಟಿದಾರರಿಗೆ ಸಕಾಲಕ್ಕೆ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಅಷ್ಟೇ ಅಲ್ಲ ಪಡಿತರ ಅವ್ಯವಸ್ಥೆ ಸರಿಪಡಿಸಲು ಸರಕಾರ ಜಾರಿಗೊಳಿಸಿರುವ ಕೆಲವೊಂದು ನಿಯಮಗಳಿಂದ ಬೇಸತ್ತು ಈಗಾಗಲೇ ಮಂಗಳೂರಿನ ಎಂಟು ಪಡಿತರ ಅಂಗಡಿಗಳು ಬಾಗಿಲು ಮುಚ್ಚಿವೆ.
ಈ ರೀತಿ ಸರಕಾರ ಮತ್ತು ಪಡಿತರ ವಿತರಕರ ಸಂಘದ ನಡುವಿನ ಹಗ್ಗಜಗ್ಗಾಟದಿಂದಾಗಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.ಸಮರ್ಪಕವಾಗಿ ಪಡಿತರ ವಿತರಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಹಿಂದೆ ಸರಕಾರ ಕೂಪನ್ ವ್ಯವಸ್ಥೆ ಜಾರಿಗೊಳಿಸಿತ್ತು. ಅನಂತರ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಕೂಪನ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿತ್ತು.
ಆದರೆ ಪಡಿತರ ವಿತರಣೆಯಲ್ಲಿ ವಂಚನೆ, ನೈಜ ಫಲಾನುಭವಿಗಳಿಗೆ ಪಡಿತರ ಒದಗಿಸದೆ ಅದನ್ನು ಇತರರಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತು ಪಾರದರ್ಶಕ ಪಡಿತರ ಸೇವೆ ನೀಡುವ ಉದ್ದೇಶದಿಂದ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಪೋಸ್ (ಪಾಯಿಂಟ್ ಆಫ್ ಸೇಲ್ = ಪಿಒಎಸ್) ಯಂತ್ರ ಅಳವಡಿಸಲಾಗಿತ್ತು. ಇದು ಪಡಿತರ ವಿತರಕರ ಅಸಮಾಧಾನಕ್ಕೆ ಕಾರಣವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರಕಾರದ ಈ ಕ್ರಮದಿಂದ ಬೇಸತ್ತು ಮಂಗಳೂರಿನ 8 ಕಡೆ ನ್ಯಾಯಬೆಲೆ ಅಂಗಡಿಗಳನ್ನೇ ವಿತರಕರು ಬಂದ್ ಮಾಡಿದ್ದಾರೆ. ಇದರಿಂದ ಆ ಭಾಗದ ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ತೀವ್ರ ಸಮಸ್ಯೆ ಉಂಟಾಗುತ್ತಿದೆ.