ಮಂಗಳೂರು: ಕೊಲೆ ಯತ್ನ, ದರೋಡೆ ಪ್ರಕರಣಗಳ ಆರೋಪಿ, ರೌಡಿಶೀಟರ್ ವಾಮಂಜೂರಿನ ಕುಟ್ಟಿಪಲ್ಕೆ ನಿವಾಸಿ ಪವನ್ರಾಜ್ ಶೆಟ್ಟಿ (21)ಯನ್ನು ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕಡಿದು ಕೊಲೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈತ 2009ರ ಜು. 4ರಂದು ಕೊಲೆಯಾದ ರೌಡಿಶೀಟರ್ ವಾಮಂಜೂರು ರೋಹಿ ಯಾನೆ ರೋಹಿದಾಸ್ ಶೆಟ್ಟಿಯ ಪುತ್ರ.ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಮನೆಗೆ ಬಂದಿದ್ದ ಪವನ್ರಾಜ್ ಊಟ ಮಾಡಿ ಹೊರ ಹೋಗಿದ್ದ. 3 ಗಂಟೆ ವೇಳೆಗೆ ತಾಯಿ ಕರೆ ಮಾಡಿದಾಗ ಮಾತನಾಡಿದ್ದ. ಆ ಬಳಿಕ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಇದರಿಂದ ಆತಂಕಿತರಾದ ಸಹೋದರ ಹಾಗೂ ತಾಯಿ ಹುಡುಕಾಟ ಆರಂಭಿಸಿದ್ದರು. ಮಂಗಳವಾರ ಬೆಳಗ್ಗೆ ಹುಡುಕುತ್ತಿದ್ದಾಗ ಮನೆಗಿಂತ 100 ಮೀಟರ್ ದೂರದಲ್ಲಿರುವ ಅರ್ಧ ಗೋಡೆಕಟ್ಟಿದ ಪಾಳುಬಿದ್ದ ಮನೆಯ ಒಳಗಿನ ಕೋಣೆಯೊಂದರಲ್ಲಿ ಪವನ್ರಾಜ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಳಿಕ ಸ್ಥಳಮಹಜರು ನಡೆಸಿ ತನಿಖೆ ಆರಂಬಿಸಿದ್ದಾರೆ.ಕೊಲೆಯಾದ ಪವನ್ರಾಜ್ ಮೇಲೆ ಕೊಲೆ ಯತ್ನ, ದರೋಡೆ ಸಹಿತ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಆತನ ಮೇಲೆ ಪೊಲೀಸರು ರೌಡಿಶೀಟರ್ ಪ್ರಕರಣ ದಾಖಲಿಸಿದ್ದರು.
ಐವರು ವಶಕ್ಕೆ; ವಿಚಾರಣೆ
ವಾಮಂಜೂರು ಕುಟ್ಟಿಪಲ್ಕೆಯ ರೌಡಿಶೀಟರ್ ಪವನ್ರಾಜ್ ಶೆಟ್ಟಿ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪೊಲೀಸರು ವಾಮಂಜೂರಿನ ಬಿಪಿನ್, ಶರಣ್ ಮತ್ತು ಹರೀಶ್ ಅವರನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಾಂಜಾ ವ್ಯವಹಾರ ಮತ್ತು ಹಳೆ ವೈಷಮ್ಯ ಈ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಸ್ಪಷ್ಟವಾದ ಕಾರಣವೇನೆಂದು ಪೊಲೀಸರ ಸಮಗ್ರ ತನಿಖೆಯಿಂದ ತಿಳಿದು ಬರಬೇಕಿದೆ.ಕೊಲೆ ಕೃತ್ಯದ ಸ್ಥಳದಲ್ಲಿ ಎರಡು ಮಚ್ಚು, ಮೊಬೈಲ್, ಚಪ್ಪಲಿ, ಗೋಡೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು.