ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರ ಶವ ಯಾತ್ರೆಯ ಸಂದರ್ಭದಲ್ಲಿ ಮೆರವಣಿಗೆಗೆ ಕಲ್ಲು ತೂರಲು ಪ್ರಚೋದನೆ ನೀಡಿದ ಆರೋಪವನ್ನು ಎದುರಿಸಿ ಬಂಧನದ ಭೀತಿ ಎದುರಿಸುತ್ತಿದ್ದ ಹಿಂದೂ ಸಂಘಟನೆಗಳ ಎಲ್ಲ ಐವರು ಮುಖಂಡರಿಗೆ ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಬಜರಂಗ ದಳದ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ರಾಜ್ಯ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪಂಪ್ವೆಲ್, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಅವರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 308 (ಕಲ್ಲು ತೂರಾಟಕ್ಕೆ ಪ್ರಚೋದನೆ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.ಬಂಧನ ಭೀತಿಯಲ್ಲಿದ್ದ ಅವರು ತಾವು ಶವಯಾತ್ರೆಯನ್ನು ಶಾಂತ ರೀತಿಯಲ್ಲಿ ಮುನ್ನಡೆಯಲು ಸಹಕರಿಸಿದ್ದು, ಯಾವುದೇ ಹಿಂಸೆಗೆ ಪ್ರಚೋದನೆ ನೀಡಿಲ್ಲ ಎಂದು ಹೇಳಿ ಈ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಐವರು ನಾಯಕರ ಪರವಾಗಿ ವಕೀಲ ಕೆ. ಶಂಭು ಶರ್ಮ ಅವರು ವಾದಿಸಿದ್ದರು.
ಷರತ್ತು ಬದ್ಧ ಜಾಮೀನು: ಇಬ್ಬರು ಜಾಮೀನು ನಿಲ್ಲಬೇಕಾಗಿದ್ದು, ಅವರಲ್ಲಿ ಒಬ್ಬರು ಕುಟುಂಬದ ಸದಸ್ಯರಾಗಿರಬೇಕು; ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ; ವಾರದಲ್ಲಿ ಎರಡು ದಿನ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತುಗಳ ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.