ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್.ಕೆ.ಬಿ. ಎಸೋಸಿಯೇಶನ್,ಗೋಕುಲ ಸಾಯನ್ ಶ್ರೀ ರಾಘವೇಂದ್ರ ಸ್ವಾಮಿ ಪುಣ್ಯ ತಿಥಿಯನ್ನು ಬುಧವಾರ, ದಿನಾಂಕ ೯/೮/೨೦೧೭ ರಂದು ಆಶ್ರಯ, ನೆರೂಲ್ ನಲ್ಲಿ ಸಂಭ್ರಮದಿಂದ ಆಚರಿಸಿತು.
ವೇದಮೂರ್ತಿ ದಿನೇಶ್ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ತೊಟ್ಟಿಲು ಮಂಟಪದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿ ಹಾಗೂ ಗೋಕುಲ ಶ್ರೀ ಗೋಪಾಲಕೃಷ್ಣ ನ ಭಾವಚಿತ್ರವನ್ನಿಟ್ಟು ಪೂಜಾ ವಿಧಿಗಳನ್ನು ಶ್ರೀ ದಿನೇಶ್ ಉಪ್ಪರ್ಣ ವಿಧಿವತ್ತಾಗಿ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ ಹಾಗೂ ಶ್ರೀ ಹರಿಕೃಷ್ಣ ಭಜನಾ ಮಂಡಳಿಯಿಂದ ಭಜನೆ ಹಾಗೂ ಶ್ರೀ ರಾಘವೇಂದ್ರ ಸ್ತೋತ್ರ, ಮಂಗಲಾಷ್ಟಕ ಪಠನೆ ನೆರವೇರಿತು, ಅರ್ಚಕ ವರ್ಗದವರಿಂದ ಶ್ರೀ ರಾಘವೇಂದ್ರ ಅಷ್ಟೋತ್ತರ, ವಿಷ್ಣು ಸಹಸ್ರನಾಮಾರ್ಚನೆ, ಶ್ರೀ ಕೃಷ್ಣಾಷ್ಟೋತ್ತರ ಪಠನೆಯಾದ ನಂತರ ಮಹಾಮಂಗಳಾರತಿ ನೆರವೇರಿತು. ವೇ.ಮೂ.ದಿನೇಶ್ ಉಪ್ಪರ್ಣರವರು 'ಶ್ರೀ ರಾಘವೇಂದ್ರ ಸ್ವಾಮಿಯವರು ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನವೇ. ಭಕ್ತಿಯಿಂದ ಭಜನೆ, ಆರಾಧನೆ ಮಾಡುವುದರಿಂದ, ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಯ ಪೂರ್ಣಾನುಗ್ರಹ ದೊರೆತು, ಕಲ್ಪವೃಕ್ಷ, ಕಾಮಧೇನುವಿನಂತೆ ನಮ್ಮೆಲ್ಲರ ಮನೋಭಿಲಾಷೆಗಳನ್ನು ಗುರುಗಳು ಈಡೇರಿಸುತ್ತಾರೆ.
ಅಂತೆಯೇ ಗುರುಗಳ ಅನುಗ್ರಹದಿಂದ ಗೋಕುಲ ಭವನದ ನಿರ್ಮಾಣ ಕಾರ್ಯ ಅತಿ ಶೀಘ್ರವಾಗಿ ನೆರವೇರಲಿ, ಅದಕ್ಕೆ ಬೇಕಾದಂತಹ ತನು-ಮನ-ಧನದ ಸಹಾಯ ಎಲ್ಲರಿಂದಲೂ ಒದಗಿ ಬರಲಿ' ಎಂದು ಪ್ರಾರ್ಥಿಸಿದರು. ಭಜನಾ ಮಂಡಳಿಯವರ ' ತೂಗಿರೆ ರಾಯರ, ತೂಗಿರೆ ಗುರುಗಳ' ಹಾಡಿನೊಂದಿಗೆ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿಯ ಸದಸ್ಯರೂ, ಜರಿಮರಿ ಶ್ರೀ ಉಮಾ ಮಹೇಶ್ವರಿ ಮಂದಿರದ ಪ್ರಧಾನ ಅರ್ಚಕರೂ ಆದ ವೇ. ಮೂ. ಎಸ್. ಎನ್. ಉಡುಪರವರು, ರಾಯರ ತೊಟ್ಟಿಲು ಮಂಟಪವನ್ನು ತೂಗಿದರು. ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಗುರುರಾಜ್ ಭಟ್, ಪೂಜಾ ಸಮಿತಿಯ ಸದಸ್ಯರುಗಳಾದ ಪ್ರೇಮಾ ರಾವ್, ಸಹನಾ ಪೋತಿ, ಶಿವರಾಯ ರಾವ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್, ಬಿ.ಎಸ್. ಕೆ. ಬಿ. ಎಸೋಸಿಯೇಶನ್ ಕಾರ್ಯಕಾರೀ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಭಟ್, ಪ್ರಶಾಂತ್ ಹೆರ್ಲೆ ಹಾಗೂ ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.