ಉಪ್ಪಳ: ವಿದ್ಯಾಭ್ಯಾಸ, ವಿಜ್ಞಾನ-ತಂತ್ರಜ್ಞಾನಗಳು ವ್ಯಾಪಕವಾಗಿ ಬೆಳೆದಿದ್ದರೂ ಮಾನವೀಯ ಮೌಲ್ಯ, ಮಾನವ ಸಮಬಂಧಗಳು ಕುಸಿದು ರಾಕ್ಷಸೀಯ ಪ್ರವೃತ್ತಿಗಳು ತಾಂಡವವಾಡುತ್ತಿರುವುದು ಈ ಶತಮಾನದ ದುರಂತವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಗಂಭೀರ ಸ್ವರೂಪ ಪಡೆಯುತ್ತಿದೆ. ಇದು ಸಾಹಿತ್ಯ, ಪುಸ್ತಕದ ಓದುವಿಕೆಯ ಕೊರತೆಯಿಂದ ಆಗಿರುವ ಅಸಮತೋಲನವಾಗಿದ್ದು, ಯುವ ಸಮೂಹಕ್ಕೆ ಈ ಬಗೆಗೆ ಜಾಗೃತಿ ಮೂಡಿಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ತರವೆಂದು ಸಂಸದ ಪಿ.ಕರುಣಾಕರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಸಮೀಪದ ಆಝಾದ್ ನಗರದಲ್ಲಿ ಭಾನುವಾರ ನಡೆದ ಓಣಂ ಆಚರಣೆ ಮತ್ತು ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಇ.ಕೆ.ನಾಯನಾರ್ ಸಕಾರಾತ್ಮಕ ಚಿಂತನೆಗಳಿಗೆ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನಸ್ಸು-ಮನಸ್ಸುಗಳನ್ನು ಬೆಸೆಯುವ ಯತ್ನಗಳಾಗಬೇಕು. ವಿಶಾಲ ಮನೋಭಾವಗಳನ್ನು ಬೆಳೆಸುವ ಓದುವ ಹವ್ಯಾಸ ವ್ಯಾಪಕ ಸಂಬಂಧಗಳನ್ನು ಗ್ರಹಿಸಲು, ಸಾಮಾಜಿಕ ಸ್ಥಿತಿಗಳೊಡನೆ ಹೆಜ್ಜೆಹಾಕಲು ನೆರವಾಗುತ್ತದೆ ಎಂದು ತಿಳಿಸಿದ ಅವರು, ಮೌಢ್ಯ, ಪಿಡುಗುಗಳಿಂದ ಹೊರಬಂದು ಆಧುನಿಕ ಪ್ರಪಂಚದೊಡನೆ ವ್ಯವಹರಿಸುವಲ್ಲಿ ಯುವ ಜನಾಂಗವನ್ನು ತಯಾರಿಗೊಳಿಸುವ ಉತ್ತಮ ಮಾಧ್ಯಮವಾಗಿ ಪುಸ್ತಕ ಪ್ರಪಂಚ ಬೆಸೆಯುತ್ತದೆ ಎಂದು ಅವರು ತಿಳಿಸಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ. ಶೆಟ್ಟಿ, ಪೈವಳಿಕೆ ಚಾವಡಿ ಉಳ್ಳಾಲ್ತಿ ಕ್ಷೇತ್ರದ ಮೊಕ್ತೇಸರ ರಂಗತ್ರೈ ಬಲ್ಲಾಳ ಅರಸರು, ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ರಾಬಿಯಾ, ಅಬ್ದುಲ್ ರಝಾಕ್ ಚಿಪ್ಪಾರು, ಆಯುರ್ವೇದ ತಜ್ಞ ವೈದ್ಯ ಡಾ.ರಾಜಾರಾಮ ದೇವಕಾನ, ಉದ್ಯಮಿ ಅಬ್ದುಲ್ ಹಮೀದ್ ಪೊರ್ಕೊಂಬು, ಮಾಜಿ ಗ್ರಾ.ಪಂ ಸದಸ್ಯ ಅಬ್ದುಲ್ಲ ಹಾಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಪ್ರಸಾದನ ಕಲಾವಿದ ದೇವಕಾನ ಕೃಷ್ಣ ಭಟ್ ಹಾಗು ನಿವೃತ್ತ ಶಿಕ್ಷಣಾಧಿಕಾರಿ ಇಬ್ರಾಹಿಂ ಎನ್ ರವರನ್ನು ಗೌರವಿಸಲಾಯಿತು.ಪ್ರಸಿದ್ದ ವಾಗ್ಮಿ ಅಂಬುಜಾಕ್ಷನ್ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮ ಸಂಘಟನಾ ಸಮಿತಿ ಉಪಾಧ್ಯಕ್ಷ ಶ್ಯಾಮ್ ಭಟ್ ಮಾಸ್ತರ್ ಸ್ವಾಗತಿಸಿ, ಸಂಚಾಲಕ ಬಾಲಕೃಷ್ಣ ಅಂಬಿಕಾನ ವಂದಿಸಿದರು. ಬಳಿಕ ಓಣಂ ಔತಣ ಕೂಟ ನಡೆಯಿತು.