ಮಂಗಳೂರು: ಎರಡು ದಿನಗಳ ಹಿಂದೆಯಷ್ಟೆ ಮಹಿಳೆಯೊಬ್ಬರು ಬೀದಿ ನಾಯಿ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಗರ್ಭಿಣಿ ಮಹಿಳೆ ಸಹಿತ ಇಬ್ಬರಿಗೆ ಬೀದಿ ನಾಯಿ ಕಡಿದಿರುವ ಘಟನೆ ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿ ನಡೆದಿದೆ.ಭಂಡಾರಿಬೆಟ್ಟುವಿನ ನಿವಾಸಿ ಭಾರತಿ ಹಾಗೂ ಶಾಲಾ ಬಾಲಕ ಕೌಶಿಕ್ ಎಂಬುವವರು ಬೀದಿ ನಾಯಿ ಕಡಿತಕ್ಕೊಳಗಾದವರು.
ಗಾಯಾಳು ಗರ್ಭಿಣಿ ಹೆಂಗಸನ್ನು ಮಂಗಳೂರಿನ ವೆನ್ಲಾಕ್ ಆಸ್ಫತ್ರೆಗೆ ದಾಖಲಿಸಲಾಗಿದ್ದರೆ, ಕೌಶಿಕ್ ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಇದೇ ಸ್ಥಳದಲ್ಲಿ ಹೇಮಾವತಿ ಎಂಬ ಮಹಿಳೆಗೆ ಬೀದಿ ನಾಯಿ ಕಡಿದಿತ್ತು.
ಬೀದಿ ನಾಯಿ ಹಾವಳಿಗಳ ಬಗ್ಗೆ ಪುರಸಭೆಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮಕೈಗೊಳ್ಳದೆ ಅಸಢ್ಡೆ ವಹಿಸಿದ್ದರಿಂದ ಬೀದಿ ನಾಯಿಗಳ ಉಪಟಳ ಇಲ್ಲಿ ಮಿತಿ ಮೀರಿದೆ. ಪುರಸಭೆಯ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತ ವಾಗಿದ್ದು, ಈ ನಾಯಿಗಳ ಕಾಟದಿಂದ ಇನ್ನೆಷ್ಟು ಮಂದಿ ಆಸ್ಪತ್ರೆ ಸೇರಬೇಕು ಎಂದು ಪ್ರಶ್ನಿಸಿದ್ದಾರೆ.