ಪತ್ರಿಕಾಗೋಷ್ಠಿಯಲ್ಲಿ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶಿವಮೂರ್ತಿ ಶಿವಾಚಾರ್ಯಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.17: ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಸಂಸ್ಕೃತಿ ಹೊಂದಿರುವ ಕರ್ನಾಟಕದ ಈ ಸಿರಿಗೆರೆ ಅಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಜನಮಾಸದಲ್ಲಿ ಹಾಸುಹೊಕ್ಕಾಗಿ ನೆಲೆಸಿದೆ. ಕಾರಣ ನಮ್ಮಲ್ಲಿನ ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಅದ್ವೀತಿಯ ಸಾಧನೆ ಮೆರೆದಿದೆ. ಅದಕ್ಕಾಗಿ ನಮ್ಮ ಮಠದ ಕೊಡುಗೆ ಅಸಮಾನ್ಯ. ಇತರರಿಂದ ಸಾಧ್ಯವಾಗದ್ದನ್ನು ನಮ್ಮ ಮಠ ಮಾಡಿ ತೋರಿಸಿದೆ. ಸಮಾಜಮುಖಿ ನಿಲುವನ್ನು ತಾಳಿ ಹಿಂದೆಂದಿಗಿಂತಲೂ ಜನಮಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಜನರೂ ನಮ್ಮತ್ತ ಹೆಚ್ಚಾಗಿ ಒಲಿಯುತ್ತಿದ್ದಾರೆ ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹÀದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ| ಶಿವಮೂರ್ತಿ ಸ್ವಾಮೀಜಿ ಅವರು ಸಂಪ್ರದಾಯ, ಸಂಸ್ಕೃತಿಗಳ ಮೂಲ ಆಶಯ ಇಂದೂ ನಿಗೂಢವಾಗಿದೆ. ಆದರೆ ಭಾರತೀಯ ಸಂಸ್ಕೃತಿಯಂತೂ ವಿಶ್ವಕ್ಕೇ ಮಾದರಿ ಆಗಿದೆ. ಪಾಶ್ಚಿಮತ್ಯಕ್ಕಿಂತ ನಮ್ಮ ಜಾನಪದ ಕಲೆಯೇ ಶ್ರೇಷ್ಠವಾದದ್ದು ಎಂದರು.
ಚಿತ್ರದುರ್ಗದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಂಚಾಲಕತ್ವದ ಶಾಲಾ ಸುಮಾರು 350 ಮಂದಿ ಕಲಾವಿದ ಮಕ್ಕಳು ಪ್ರದರ್ಶಿಸುವ `ದೇಶದ ಸಿರಿ-ಜನಪದ ಸಿರಿ' ವಿಶೇಷ ಕಾರ್ಯಕ್ರಮದ ಬಗ್ಗೆ ತಿಳಿಸಿ ಭಾವೀ ಜನಾಂಗದಲ್ಲಿ ಉದಾತ್ತ ಹಾಗೂ ಉಜ್ವಲ ಸಂಪ್ರದಾಯವನ್ನು ದಾಖಲಿಸಿ, ವಿಶ್ವದೆಲ್ಲೆಡೆ ವ್ಯಾಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದೇ ನಮ್ಮ ಉದ್ದೇಶ. ಯುವ ಪೀಳಿಗೆಗಾಗಿ ಇದೊಂದು ಹೊಸ ಪ್ರಯತ್ನ ಇದು ರಾಷ್ಟ್ರದ ಸಮಸ್ತ ಜನತೆಗೆ ಇಷ್ಟವಾಗಬಹುದು ಎಂದೂ ಆಶಯ ವ್ಯಕ್ತಪಡಿಸಿ ಇದು ಬರೇ ಮನೋರಂಜನೆ ಆಗಿಸದೆ ನಾಡಿನ ಬದುಕಿನ ಅನಾವರಣ ಆಗಿಸಿ ಅಪರೂಪದ ಜಾನಪದ ಉತ್ಸವವಾಗಿ ಜನತೆ ಸ್ವೀಕರಿಸುವರು ಎಂಬುದು ನಮ್ಮ ಅಭಿಮತ ಎಂದರು.
ಇಂದು ವಡಲಾದ ಎನ್ಕೆಇಎಸ್ ವಿದ್ಯಾಲಯದಲ್ಲಿ ದೇಶದ ಸಿರಿ-ಜನಪದ ಸಿರಿ
ಇಂದು (ಡಿ.17) ಭಾನುವಾರ ಸಂಜೆ 5.00 ಗಂಟೆಗೆ ಇದೇ ಮೊದಲ ಬಾರಿ ಮುಂಬಯಿ ವಡಾಲಾ ಅಲ್ಲಿನ ಎನ್ಕೆಇಎಸ್ ವಿದ್ಯಾ ಸಂಕುಲದಲ್ಲಿ ಮೈಸೂರು ಅಸೋಸಿಯೇಷನ್ ಮುಂಬಯಿ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ ವಡಲಾ ಮತ್ತು ಕರ್ನಾಟಕ ಸಂಘ ಮುಂಬಯಿ ಇವುಗಳ ಸಹಯೋಗದೊಂದಿಗೆ ಜಾನಪದ ಉತ್ಸವ ನಡೆಯಲಿದೆ. ಶ್ರೀನಿವಾಸ ಜಿ. ಕಣ್ಣಪ್ಪ ವಿನ್ಯಾಸ ಹಾಗೂ ಸಂಯೋಜನೆಯ ದೇಶದ ಸಿರಿ-ಜನಪದ ಸಿರಿ' ವಿಶೇಷ ಕಾರ್ಯಕ್ರಮವನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ತರಳಬಾಳು ಕಲಾಸಂಘ (ರಿ.) ಪ್ರದರ್ಶಿಸಲಿದೆ.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಕಾರ್ಯಕ್ರಮ ಉದ್ಘಾಟಿಸುವರು. ಗತ ಕರ್ನಾಟಕ ಸರ್ಕಾರದ ಕಾರ್ಯದರ್ಶಿವಿಠ್ಠಲ ಮೂರ್ತಿ, ಐಪಿಎಸ್ ಅಧಿಕಾರಿ ಶಂಕರ ಬಿದರಿ (ನಿವೃತ್ತ) ಅತಿಥಿü ಅಭ್ಯಾಗತರುಗಳಾಗಿ ಆಗಮಿಸುವರು.
ಈ ಜಾನಪದ ನೃತ್ಯ ಕಾರ್ಯಕ್ರಮ, ಮುಂಬಯಿಯ ಕನ್ನಡಿಗರಿಗೆ ಒಂದು ಅಪೂರ್ವ ಹಾಗೂ ಮುಕ್ತ ಅವಕಾಶವಿದ್ದು ಮಹಾನಗರದಲ್ಲಿನ ಕನ್ನಡಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅನುಭವಿಸಿ ಸಂತುಷ್ಟರಾಗುವಂತೆ ಸಂಘಟನಾ ಸಂಸ್ಥೆಗಳು ಈ ಮೂಲಕ ವಿನಂತಿಸಿದೆ
ಮೈಸೂರು ಅಸೋಸಿಯೇಷನ್ ಮುಂಬಯಿನ ಡಾ| ಬಿ.ಆರ್ ಮಂಜುನಾಥ್ ಸ್ವಾಗತಿಸಿದರು. ಜಾನಪದ ಉತ್ಸವದ ಸಂಯೋಜಕ ಶ್ರೀನಿವಾಸ ಜಿ.ಕಣ್ಣಪ್ಪ ಪ್ರಸ್ತಾವನೆಗೈದರು. ಮೈಸೂರು ಅಸೋಸಿಯೇಷನ್ ಮುಂಬಯಿ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ನಿತ್ಯಾನಂದ ಡಿ.ಕೋಟ್ಯಾನ್, ಕೆ.ಮಂಜುನಾಥ್, ಮೋಹನ್ ಮಾರ್ನಾಡ್, ಪಿ.ಸಿ ಎನ್ ರಾವ್, ಗುರುರಾಜ್ ಎನ್.ನಾಯಕ್, ಶ್ರೀನಿವಾಸ ಜೋಕಟ್ಟೆ, ಅಶೋಕ್ ಎಸ್.ಸುವರ್ಣ, ಸತೀಶ್ ಎನ್.ಬಂಗೇರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.