ಭಜನೆಗಳು ಮನಗಳ ಜ್ಞಾನೋದಯಗೊಳಿಸುತ್ತವೆ - ವಿದ್ವಾನ್ ವಿಶ್ವನಾಥ್ ಕೈರಬೆಟ್ಟು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.19: ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿಂದು ಭಜನೆ ಕೀರ್ತನೆಯೊಂದಿಗೆ 25ನೇ ವಾರ್ಷಿಕ ಪುರಂದರದಾಸರ ಆರಾಧನೆ ನಡೆಸಲ್ಪಟ್ಟಿತು. ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ನಿರ್ದೇಶನ ಹಾಗೂ ಪೂಜಾಧಿಗಳೊಂದಿಗೆ ನೆರವೇರಿಸಲ್ಪಟ್ಟಿತು.
ಅಪನಂಬಿಕೆಗಳ ನಿರ್ಮೂಲನಕ್ಕೆ ಭಕ್ತಿ ಮತ್ತು ಭಕ್ತಿಯ ಶ್ರದ್ಧೆಗೆ ಭಜನೆ ಅವಶ್ಯವಾದದ್ದು. ಭಜನೆಗಳು ಮಾನವನನ್ನು ಭಗವಂತನತ್ತ ಸಮೀಪಿಕರಿಸುತ್ತದೆ. ಭಜನೆಗಳಿಂದ ಸಂಸ್ಕೃತಿಗಳ ಅರಿವು ಸಾಧ್ಯವಾಗಿ ಸಂಸ್ಕಾರದ ಬಾಳಿಗೆ ಪೂರಕವಾಗುವುದು. ಈ ಮಧ್ಯೆ ಭಜನೆಗಳು ಮನಗಳ ಜ್ಞಾನೋದಯಗೊಳಿಸುತ್ತವೆ. ಇವುಗಳಿಗೆಲ್ಲಾ ಗುರುವರ್ಯರ ಅವಶ್ಯವಿದೆ. ಗುರುಗಳ ಶಿಷ್ಯನಾಗುವವನೇ ಪರಮ ಭಕ್ತನಾಗುವನು ಎಂದು ವಿದ್ವಾನ್ ವಿಶ್ವನಾಥ್ ಕೈರಬೆಟ್ಟು ತಿಳಿಸಿ ನೆರೆದ ಹರಿದಾಸ ಭಕ್ತರಿಗೆ ಹಿತನುಡಿಗಳನ್ನಾಡಿದರು.
ರತ್ನಾ ಆಚಾರ್ಯ, ಸಾಬಕ್ಕ ಖೇಡೆಕರ್, ಮಾಮಿ ಪ್ರಸಿದ್ಧಿಯ ಸುನಂದ ಉಪಾಧ್ಯಾಯ ಇವರೆಲ್ಲರ ಭಜನಾನಿಷ್ಠೆ ಇಂತಹ ಕಾರ್ಯಕ್ರಮಕ್ಕೆ ಪ್ರೇರಕವಾಗಿದೆ. ಸದ್ಯ ಸ್ವರ್ಗಸ್ಥ ರತ್ನಾ ಆಚಾರ್ಯ ಸ್ಮರಣೆಯೊಂದಿಗೆ ಅವರಿಗೆ ವೈಕುಂಠಸಮಾರಾಧನೆ ಕರುಣಿಸಲಿ. ಭಜನಾ ಮಂಡಳಿಗಳ ಸೇವೆ, ಪೆÇ್ರೀತ್ಸಹ ಎಲ್ಲರಿಗೂ ಅನುಕರಣೀಯ. ಮುಂದೆಯೂ ಪರಿಪೂರ್ಣ ಮನಸ್ಸಿನಿಂದ ಭಜನೆಯನ್ನಾಡಿ ಶ್ರೀದೇವರನ್ನು ಸ್ತುತಿಸಿ ಜೀವನ ಪಾವನ ಗೊಳಿಸಿರಿ ಎಂದೂ ವಿಶ್ವನಾಥ್ ಭಟ್ ಹಾರೈಸಿದರು.
ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಸಮಿತಿ ಗೌರವ ಅಧ್ಯಕ್ಷ ಡಾ| ಎ.ಎಸ್ ರಾವ್, ಭಜನಾ ಕಾರ್ಯಕ್ರಮ ಸ್ಪರ್ಧೆಯ ಸಂಘಟಕಿ ಸುನಂದ ಸದಾನಂದ ಉಪಾಧ್ಯಾಯ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ವೇದಿಕೆಯಲ್ಲಿ ಆಸೀನರಾಗಿದ್ದು ವಿಜೇತ ಭಜನಾ ತಂಡಗಳಿ ಬಹುಮಾನ, ಫಲಕ ಪ್ರದಾನಿಸಿ ಅಭಿನಂದಿಸಿದರು.
ಎ.ಎಸ್ ರಾವ್ ಮಾತನಾಡಿ ಭಜನೆ ಮಹಾನ್ ಕಾಯಕವಾಗಿದೆ. ಭಜನೆಗಳು ಎಂದೂ ಸ್ಪರ್ಧೆ ಆಗಲಾರದು. ಆದರೂ ತಂಡಗಳ ಪೆÇ್ರೀತ್ಸಹಕ್ಕಾಗಿ ಹೆಸರಿಗಷ್ಟೇ ಸ್ಪರ್ಧೆ. ಭಜನೆಯಲ್ಲಿ ಭಕ್ತಿ ಇಮ್ಮಡಿಗೊಳ್ಳುತ್ತಿದೆ ಆದುದರಿಂದ ಎಲ್ಲರೂ ಭಜನೆಯಲ್ಲಿ ಚಿಂತೆನೆ ಮೂಡಿಸಿ ಅನುಸರಿಸುವಿಕೆ ಅವಶ್ಯವಾಗಿದೆ ಎಂದು ಎ.ಎಸ್ ರಾವ್ ತಿಳಿಸಿದರು.
ರಾಮದಾಸ ಉಪಾಧ್ಯಾಯ ಸ್ವಾಗತಿಸಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯೋತ್ಸವ ಸಮಾಪ್ತಿ ಸಂಭ್ರಮ ಎಲ್ಲರಲ್ಲೂ ಹರ್ಷ ಮೂಡಿಸಿದೆ. ಕಳೆದ ಎರಡು ವರ್ಷಗಳ ಸರ್ವಜ್ಞ ಪೀಠಾಹೋಹಣ ಮೂಲಕ ಒಂದೆಡೆ ಪೇಜಾವರಶ್ರೀಗಳ ಇನ್ನೊಂದೆಡೆ ಏಕೈಕ ಪೀಠಾಧಿಪತಿಯಾಗಿ ಇತಿಹಾಸ ನಿರ್ಮಾಣವಾಗಿದೆ ಎಂದರು.
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಬಿ.ಆರ್ ಗುರುಮೂರ್ತಿ, ಪೇಜಾವರ ಮಠದ ವ್ಯವಸ್ಥಾಪಕ ಹರಿ ಭಟ್, ಶ್ರೀನಿವಾಸ ಭಟ್ ಪರೇಲ್, ವಿಜಯಲಕ್ಷಿ ್ಮೀ ಸುರೇಶ್ ರಾವ್, ಸುಶೀಲಾ ಎಸ್.ದೇವಾಡಿಗ, ಸುಮತಿ ಆರ್.ಶೆಟ್ಟಿ, ಪಿ.ವಿ ಐತಾಳ್, ಶೇಖರ್ ಸಸಿಹಿತ್ಲು, ಎಂ.ಎಸ್ ರಾವ್ ಚಾರ್ಕೋಪ್, ಶೇಖರ್ ಸಾಲ್ಯಾನ್, ಪದ್ಮಜಾ ಮಣ್ಣೂರು, ಶ್ಯಾಮಲಾ ಅವಿನಾಶ್ ಶಾಸ್ತ್ರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಮಹಾನಗರದಾದ್ಯಂತದ ಸುಮಾರು15ಕ್ಕೂ ಮಿಕ್ಕಿದ ಭಜನಾ ಮಂಡಳಿಗಳು ಶಾಸ್ತ್ರೋಕ್ತವಾಗಿ ಭಜನೆ ನೆರವೇರಿಸಿದವು. ಸುನಂದ ಉಪಾಧ್ಯಾಯ ಧನ್ಯವದಿಸಿದರು.