ಮುಂಬಯಿ, ಜ.20: ಪ್ರಸಾದ್ ನೇತ್ರಾಲಯಕ್ಕೆ ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿರುವ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ ಸರಸ್ವತಿ ಅವರನ್ನು ಕರ್ನಾಟಕರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದಿಂದ ಜ.13ರಂದು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಎಂ.ನಾರಾಯಣ್ ಭಟ್ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಈಗಾಗಲೇ ದೇಹ, ನೇತ್ರದಾನದ ಒಪ್ಪಿಗೆ ಪತ್ರಕ್ಕೆ ರುಜು ಮಾಡಿರುವ ಉಪಾಧ್ಯಕ್ಷೆ ಹೆಚ್.ಕೃಷ್ಣಾಬಾಯಿ, ಕಾರ್ಯದರ್ಶಿ ಎಸ್, ಎಸ್, ತೋನ್ಸೆ, ಸಭಾಧ್ಯಕ್ಷರು ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಸರಸ್ವತಿ ಅವರನ್ನು ಅಭಿನಂದಿಸಿರು.
6ನೇ ವೇತನ ಆಯೋಗ ತಾತ್ಕಾಲಿಕ ಪರಿಹಾರಕ್ಕೆ ಶಿಫಾರಸ್ಸು ಮಾಡದೆ, ಸ್ಪಷ್ಟ ನಿಲುವನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಪ್ರಸಾರವಾಗುತ್ತಿರುವ ಬಗ್ಗೆ ಸಭೆ ಅಸಂತೋಷ ವ್ಯಕ್ತಪಡಿಸಿತು. ಕೇಂದ್ರ ಸರಕಾರತನ್ನ ನಿವೃತ್ತ ನೌಕರರಿಗೆ ನೀಡುತ್ತಿರುವಎಲ್ಲಾ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಮನವಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಾರ್ಯಕಾರೀ ಸಮಿತಿಯ ಸದಸ್ಯೆ ಕೆ.ಪುಷ್ಪಾವತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯ ಪ್ರಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯಣ್ಣ ಭಂಡಾರಿ, ಗ್ರಾಮೀಣ ಅಭಿವೃದ್ದಿ ಇಲಾಖೆಯ ಹಿರೇಮಠ ವಾಮನ್ ಭಟ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜೊತೆ ಕಾರ್ಯದರ್ಶಿ ಬಿ.ರವಿನಾಥ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಪಾಂಡು ಎಂ.ಶೆಟ್ಟಿ ವಂದಿಸಿದರು.