ನಾಲ್ಕು ತಿಂಗಳ ಮುಂಚಿತವಾಗಿ ಇತ್ತೀಚೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೇ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು ಹಿಂದಿನ ಅವಧಿಯಲ್ಲಿ ಹದಿನಾಲ್ಕು ತಿಂಗಳ ಮುಂಚಿತವಾಗಿ ರಾಜೀನಾಮೆ ನೀಡಿದ್ದರು. ಪದೇ ಪದೇ ರಾಜೀನಾಮೆ ನೀಡುವುದು. ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಇದು ಕ್ಷೇತ್ರದ ಅಭಿವೃದ್ಧಿಯ ಕುರಿತಾದ ಹಾಲಾಡಿಯವರ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ. ಈ ಬಾರಿ ಅವರು ಮತಯಾಚಿಸಿ ನಿಮ್ಮ ಮನೆಬಾಗಿಲಿಗೆ ಬಂದಾಗ ಅದೇಕೆ ನೀವು ಪದೇ ಪದೇ ರಾಜೀನಾಮೆ ನೀಡುತ್ತೀರಿ? ಈ ಕ್ಷೇತ್ರಕ್ಕೆ ಸರಕಾರದಿಂದ ದೊರಕಬಹುದಾದ ಸೌಲಭ್ಯವನ್ನು ಶಾಸಕರಿಲ್ಲದ ಅವಧಿಯಲ್ಲಿ ಒದಗಿಸುವವರು ಯಾರು? ಎಂದು ಪ್ರಶ್ನಿಸಿ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.
ಅವರು ಬುಧವಾರ ಸಂಜೆ ನಡೆದ ಮೊಳಹಳ್ಳಿ ತಾಲೂಕು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೆ ಪ್ರತಾಪಚಂದ್ರ ಶೆಟ್ಟರು ಶಾಸಕರಾಗಿದ್ದ ಅವಧಿಯಲ್ಲಿ ಪ್ರತೀ ಶನಿವಾರ ಕುಂದಾಪುರದ ಸಂತೆಯ ದಿನ ಕುಂದಾಪುರದ ತನ್ನ ಕಛೇರಿಯಲ್ಲಿ ಕುಳಿತು ಗ್ರಾಮೀಣ ಪ್ರದೇಶದಿಂದ ಬರುವ ಜನರ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆ ಮೂಲಕ ಜನರ ಕೆಲಸಗಳನ್ನು ಮಾಡಿ ಕೊಡುತ್ತಿದ್ದರು. ಆದರೆ ಇಂದು ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಶ್ನಿಸಬೇಕಾದ ಶಾಸಕರು ಮತ್ತು ಸಂಸದರು ಅಧಿಕಾರಿವರ್ಗವನ್ನು ಪ್ರಶ್ನಿಸುತ್ತಿಲ್ಲ. ಸರಕಾರಿ ಕಛೇರಿಗಳಲ್ಲಿ ಬ್ರೋಕರ್ಗಳ ಹಾವಳಿ ಮಿತಿಮೀರಿದೆ. ಗ್ರಾಮೀಣ ಪ್ರದೇಶದ ಜನತೆ ಅಲೆದು ಅಲೆದು ಹೈರಾಣವಾಗಿ ಹೋಗಿದ್ದಾರೆ. ಇದು ಅತ್ಯಂತ ನೋವಿನ ವಿಚಾರವಾಗಿದೆ.
ಮತದಾರರು ಈ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿಗೋಪಾಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೆದೂರು ಸದಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೊಳಹಳ್ಳಿ ದಿನೇಶ್ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮೊಳಹಳ್ಳಿ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಮಹೇಶ್ ಹೆಗ್ಡೆ, ಮಾಜಿ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ಯುವಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವಾಣಿ ಶೆಡ್ತಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮರತ್ತೂರು ಚಂದ್ರಶೇಖರ ಶೆಟ್ಟಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ರವಿಚಂದ್ರ ಕುಲಾಲ್, ಮುಖಂಡರಾದ ಸೀತಾರಾಮ ಹೆಗ್ಡೆ, ಯಡಾಡಿ ನರಸಿಂಹ ಮೊಗವೀರ, ಕಿಶೋರ್ ಶೆಟ್ಟಿ, ಕೃಷ್ಣ ನಾಯ್ಕ, ಸಂತೋಷ್ ಪೂಜಾರಿ, ಚಂದ್ರ ಶೆಟ್ಟಿ, ಚೈತ್ರಾ ಅಡಪ, ಸೀತಾರಾಮ ಶೆಟ್ಟಿ, ಸುರೇಶ್ ಮಡಿವಾಳ, ಶರತ್ ಮಡಿವಾಳ, ಉಮೇಶ್ ಮಾಸ್ತಿಕಟ್ಟೆ, ಇಂದಿರಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.