ಕಾಪು : ಪ್ರವಾದಿ ಮುಹಮ್ಮದ್(ಸ) ರವರು ಮಾನವರ ಕಲ್ಯಾಣಕ್ಕಾಗಿ ದೇವನಿಂದ ಕಳುಹಿಸಲ್ಪಟ್ಟಿರುವ ಪ್ರವಾದಿಯಾಗಿದ್ದು, ಅವರ ಅನುಸರಣೆಯಿಂದ ಮನುಷ್ಯ ಇಹ ಮತ್ತು ಪರಲೋಕದಲ್ಲೂ ವಿಜಯಿಯಾಗುವನು.
ಅವರು, ಲೋಕದಲ್ಲಿದ್ದ ಎಲ್ಲಾ ರೀತಿಯ ಶೋಷಣೆ, ದೌರ್ಜನ್ಯ, ಅನಾಚಾರ, ವ್ಯಭಿಚಾರ, ಜೂಜು, ಬಡ್ಡಿ, ಮಧ್ಯಪಾನ, ಮೂಡನಂಬಿಕೆ ಮುಂತಾದ ಕೆಡುಕುಗಳನ್ನು ತೊಡೆದು ಹಾಕಿ ಒಂದು ಉತ್ತಮ ಮಾದರಿ ಸಮಾಜವನ್ನು ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಪ್ರವಾದಿಯವರು ತನ್ನ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ಸಹಿಸುತ್ತಿದ್ದರು. ಆದರೆ ಜನರ ಮೇಲೆ ಆಗುತ್ತಿದ್ದ ಅನ್ಯಾಯ, ದೌರ್ಜನ್ಯವನ್ನು ಸಹಿಸುತ್ತಿರಲಿಲ್ಲ. ಅದನ್ನೇ ಇಂದು ಮುಸ್ಲಿಮರು ಮುಂದುವರಿಸಿಕೊಂಡು ಹೋಗಬೇಕು ಎಂದು ಮಲ್ಪೆ ಜಾಮಿಯಾ ಮಸೀದಿಯ ಧರ್ಮಗುರುಗಳು ಮೌಲಾನ ಇಮ್ರಾನುಲ್ಲಾಹ್ ಖಾನ್ ಮನ್ಸೂರಿಯವರು ಕೊಂಬಗುಡ್ಡೆ ಜಾಮಿಯಾ ಮಸ್ಜಿದ್ ಜದೀದ್-ಎ-ಕಲಾನ್ನಲ್ಲಿ ಜಮಅತೆ ಇಸ್ಲಾವಿೂ ಹಿಂದ್ ಕಾಪು ವರ್ತುಲ ಹಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟರು.
ಮುಸ್ಲಿಮರಿಂದು ಕೆಲವು ಆಂಶಿಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ತಾಳಿಕೊಂಡು, ಬಹುಅಂಶೀಯ ವಿಷಯಗಳಲ್ಲಿ ಅಡಕವಾಗಿರುವ ನೈಜ ಉದ್ದೇಶವನ್ನು ಮರೆತ ಪರಿಣಾಮ ಶೋಷಿಸಲ್ಪಡುವವರಾಗಿ ಮಾರ್ಪಟ್ಟಿದ್ದಾರೆ. ಯಾರ್ಯಾರೋ ಮುಸ್ಲಿಮರನ್ನು ಭಯೋತ್ಪಾದಕರು, ಹೊರಗಿನಿಂದ ಬಂದವರು, ದೇಶದ್ರೋಹಿಗಳು ಎಂಬ ಪಟ್ಟವನ್ನು ನೀಡುತ್ತಾರೆ. ಇದು ಅವರ ತಪ್ಪಲ್ಲ. ಇಸ್ಲಾಮನ್ನು ಸರಿಯಾಗಿ ಅವರಿಗೆ ಪರಿಚಯ ಮಾಡಿಸದ ಮುಸ್ಲಿಮರ ತಪ್ಪು. ಇಂದು ಇಸ್ಲಾಮನ್ನು ಪ್ರಸಕ್ತ ಸನ್ನಿವೇಶದಲ್ಲಿ ಅದರ ಬೇಡಿಕೆಯಂತೆ ಪ್ರಸ್ತುತ ಪಡಿಸಬೇಕಾದುದು ಮುಸ್ಲಿಮರ ಕರ್ತವ್ಯ. ಅದಕ್ಕೆ ಈಗಿಂದಲೇ ಪ್ರಾರಂಭಿಸಿ ಜನರ ಬಳಿಗೆ ಹೋಗಬೇಕು ಎಂದರು. ಜಾಮಿಯಾ ಮಸ್ಜಿದ್ ಜದೀದ್-ಎ-ಕಲಾನ್ ಕೊಂಬಗುಡ್ಡೆ ಇದರ ಧರ್ಮಗುರುಗಳಾದ ಮೌಲಾನಾ ಮುಹಮ್ಮದ್ ಪರ್ವೇಝ್ ಆಲಮ್ ನದ್ವಿಯವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮುಹಮ್ಮದ್ ಇಕ್ಬಾಲ್ರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
.