ಮಂಗಳೂರು: ಅತ್ಯಾಚಾರ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ 14 ವರ್ಷದ ಬಳಿಕ ಆರೋಪಿಯಬ್ಬನನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನೆಕ್ಕಿಲಾಡಿ ಗ್ರಾಮದ ಹಿತೇಶ್ ಎಂದು ಗುರುತಿಸಲಾಗಿದೆ.ಈತ ಗಿರೀಶ್ ಎಂಬಾತನೊಂದಿಗೆ ಸೇರಿ ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. 2004 ರಲ್ಲಿ ಹಿತೇಶ್ ಹಾಗು ಗಿರೀಶ್ ಕರಾಯದ ಮನೆಯೊಂದಕ್ಕೆ ನುಗ್ಗಿ ಪತಿ ಹಾಗು ಮಕ್ಕಳ ಎದುರೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಕೃತ್ಯ ಎಸಗಿದ ಬಳಿಕ ಈ ಇಬ್ಬರೂ ಅರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಅತ್ಯಾಚಾರ ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಪ್ರಕರಣದ ಕುರಿತು ತನಿಖೆ ಆರಂಭಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ, ಇತ್ತಿಚೆಗೆ ಆರೋಪಿ ಹಿತೇಶ್ ಬೆಂಗಳೂರಿನಲ್ಲಿರುವ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಅಲ್ಲಿಗೆ ತೆರಳಿ ಅರೋಪಿ ಹಿತೇಶ್ ನನ್ನು ಬಂಧಿಸಿ ಕರೆ ತಂದಿದ್ದಾರೆ.ಆದರೆ ಇನ್ನೊಬ್ಬ ಆರೋಪಿ ಗಿರೀಶ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.