ಮಂಗಳೂರು: ಕೇರಳದಾದ್ಯಂತ ಭಾರೀ ಆತಂಕ ಮೂಡಿಸಿರುವ ನಿಫಾ ವೈರಸ್ ಸೋಂಕಿನ ಕುರಿತು ಕರ್ನಾಟಕದಲ್ಲಿಯೂ ಭಯ ಕಾಡಲಾರಂಭಿಸಿದೆ. ಕೇರಳದಲ್ಲಿ ಭಾರೀ ವೇಗವಾಗಿ ಈ ಸೋಂಕು ಹರಡುತ್ತಿದ್ದು, ಈಗಾಗಲೇ 11 ಕ್ಕೂ ಹೆಚ್ಚು ಜನರು ನಿಫಾ ವೈರಸ್ ಗೆ ಬಲಿಯಾಗಿದ್ದಾರೆ.ಕೋಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಕಾಣಿಸಿಕೊಂಡ ವಿರಳ ಹಾಗೂ ಮಾರಣಾಂತಿಕ ಈ ನಿಫಾ ವೈರಸ್ ಕುರಿತು ದೇಶದಾದ್ಯಂತ ಚರ್ಚೆ ಆರಂಭವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಅರಂಭವಾಗಿದೆ.ಈ ಮಾರಣಾಂತಿಕ ನಿಫಾ ವೈರಸ್ ಕುರಿತು ರಾಜ್ಯದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಭೇಟಿ ನೀಡುವವರ ಕುರಿತು ನಿಗಾ ವಹಿಸಲಾಗಿದ್ದು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಜಾರಿ ಮಾಡಿದೆ.ಕೇರಳ ಗಡಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಅಸ್ಪತ್ರೆಗಳಿಂದ ಆರೋಗ್ಯ ಇಲಾಖೆ ವರದಿ ತರಿಸಿಕೊಂಡಿದ್ದು ನಿಫಾ ವೇರಸ್ ವೈರಸ್ ತಗುಲಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಜಿಲ್ಲೆಯ ಎಲ್ಲಾ ಖಾಸಗಿ ಹಾಗು ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಬಗ್ಗೆ ಗಮನ ಇರಿಸುವಂತೆ ಸೂಚನೆ ನೀಡಲಾಗಿದೆ.ಅದರಲ್ಲೂ ಕೇರಳದ ರೋಗಿಗಳ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ನಿಫಾ ಸೊಂಕು ತಗುಲಿದ ರೋಗಿಗಳ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣ ಇಲಾಖೆಗೆ ಸೂಚಿಸುವಂತೆ ಹಾಗೂ ರೋಗಿಗಳ ರಕ್ತವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸುವಂತೆ ನಿರ್ದೇಶನ ನೀಡಲಾಗಿದೆ.
ಕೇರಳದಲ್ಲಿ ನಿಫಾ ವೈರಸ್ ಗೆ ನರ್ಸ್ ಒಬ್ಬರು ತುತ್ತಾದ ಕಾರಣ ವೈದ್ಯಕೀಯ ಸಿಬ್ಬಂದಿಗಳು ಕೂಡ ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ. ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಈ ವೈರಸ್ ನ ಲಕ್ಷಣವಾಗಿದ್ದು ಈ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.