ರೋಟರಿ ಸಂಸ್ಥೆಯ ಬೆಳವಣಿಕೆಗೆ ಮತ್ತು ಸಮಾಜದ ಏಳಿಗೆಗೆ ಸ್ವಹಿತ ಮೀರಿದ ಸೇವೆ ಸಲ್ಲಿಸಿ -ಎಮ್.ಎಮ್. ಚೆಂಗಪ್ಪ
ಮಂಗಳೂರು ಜೂ. 17 : “ರೋಟರಿ ಸಂಸ್ಥೆಯು ಶತಮಾನ ಪೂರೈಸಿದ ಪ್ರಪ್ರಥಮ ಸ್ವಯಂಪ್ರೇರಿತ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾಗಿದ್ದು ಮನುಕುಲಕ್ಕೆ ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದ್ದು ಅದಕ್ಕನುಗುಣವಾಗಿ ಸದಸ್ಯರು ರೋಟರಿ ಅಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಶ್ರಮಿಸಬೇಕಂದು, ಕೊಡಗು ಜಿಲ್ಲಾ ಮೂಲದ ರೋಟರಿ ಜಿಲ್ಲಾ 3181 ರ ಗವರ್ನರ್ರಾದ ರೋ| ಎಮ್.ಎಮ್. ಚೆÀಂಗಪ್ಪನವರು ಕರೆ ನೀಡಿದ್ದಾರೆ. ಅವರು ತಾ.16.06.2018 ರಂದು ನಗರದ ಹೋಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ, ನೂತನವಾಗಿ ಸ್ಥಾಪಿಸಲ್ಪಟ್ಟ ರೋಟರಿ ಮಂಗಳೂರು ಸಿಟಿ ಸಂಸ್ಥೆಯನ್ನು ಉದ್ಘಾಟಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು”. ಇದೊಂದು ನನ್ನ ಧೀರ್ಘಾವಧಿಯ ವೈಯುಕ್ತಿಕ ಕನಸು ನನಸ್ಸಾಗಿದ್ದು ಎಂದು ಸಂತಸ ವ್ಯಕ್ತ ಪಡಿಸಿ, ನೂತನ ಸಂಸ್ಥೆಗೆ ಅಮೆರಿಕಾ ರಾಷ್ಟ್ರ ಮೂಲದ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯು ಮಾನ್ಯತೆ ನೀಡಿ ಪ್ರಾಯೋಜಿಸಿದ ಸನದು, ಪ್ರಮಾಣ ಪತ್ರವನ್ನು ಸ್ಥಾಪನಾಧ್ಯಕ್ಷ ರೋ| ಡಾ| ರಂಜನ್ ರವರಿಗೆ ಹಸ್ತಾಂತರಿಸಿ, ಅಭಿನಂದಿಸಿ, ಸಂಸ್ಥೆಯ ಭವಿಷ್ಯಕ್ಕೆ ಶುಭ ಹಾರೈಸಿದರು.
ಸ್ಥಾಪಾನಾಧ್ಯಕ್ಷ ರೋ| ಡಾ| ರಂಜನ್ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಭವಿಷ್ಯದ ಯೋಜನೆಗಳ ಸಂಕ್ಷಿಪ್ತ ವರದಿ ನೀಡಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಸದಸ್ಯರ ಸಹಕಾರ ಕೋರಿದರು. ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಬೋಳಾರ ದ.ಕ. ಜಿ.ಪ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೂ.20,000- ಮೌಲ್ಯದ ಪುಸ್ತಕಗಳನ್ನು ದಾನದ ರೂಪದಲ್ಲಿ ನೀಡಲಾಯಿತು ಮತ್ತು ಶಾಲೆಯ ಶೌಚಾಲಯ ನಿರ್ಮಾಣಕ್ಕಾಗಿ ಆಶ್ವಾಸನ ಪತ್ರವನ್ನು ಶಾಲಾ ಮುಖ್ಯೋಪಧ್ಯಾಯಿನಿಯವರಾದ ಶ್ರೀಮತಿ ಮೀನಾಕ್ಷಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ರೋಟರಿ ಪ್ರತಿಷ್ಠಾನಕ್ಕೆ 4,000 ಡಾಲರ್ಗಳನ್ನು (ರೂ.2.40 ಲಕ್ಷ) ದೇಣಿಗೆಯಾಗಿ ನೀಡುವುದಾಗಿ ಆಶ್ವಾಸನೆ ನೀಡಲಾಯಿತು.
ರೋಟರಿ ಜಿಲ್ಲಾ ಸಲಹೆಗಾರರಾದ ರೋ. ಸೂರ್ಯಪ್ರಕಾಶ್ ಭಟ್ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರೋಟರಿ ಸಂಸ್ಥೆಯು ಸ್ನೇಹ, ಬಾಂಧವ್ಯಕ್ಕೆ ಒಂದು ಸೂಕ್ತ ವೇದಿಕೆಯಾಗಿದ್ದು ಸದಸ್ಯರು ಕ್ರಿಯಾಶೀಲರಾಗಿ ಸಂಸ್ಥೆಯ ನೀತಿ, ನಿಯಮ, ಧ್ಯೇಯೋದ್ದೇಶಗಳನ್ನು ಪರಿಪಾಲಿಸಬೇಕೆಂದು ಸಲಹೆ ನೀಡಿ ಸಂಸ್ಥೆಯ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದರು. ರೋಟರಿ ಜಿಲ್ಲಾ ವಿಸ್ತರಣಾ ಸಮಿತಿಯ ಅಧ್ಯಕ್ಷರಾದ ರೋ| ಡಾ| ಅರವಿಂದ್ ಭಟ್ಟರವರು ಅಭಿನಂದನಾ ಭಾಷಣ ಮಾಡಿದರು. ಸಹಾಯಕ ಗವರ್ನರ್ರಾದ ರೋ| ರಾಜೇಂದ್ರ ಕಲ್ಬಾವಿಯವರು ಸಂಸ್ಥೆಯ ಪ್ರಪ್ರಥಮ ಸಾಪ್ತಾಹಿಕ ವಾರ್ತಾ ಪತ್ರಿಕೆ “ಸಿಟಿ ಬಿಟ್ಸ್ ಆ್ಯಂಡ್ ಬೈಟ್ಸ್” ಪ್ರತಿಯನ್ನು ಬಿಡುಗಡೆಗೊಳಿಸಿ ಸಂಸ್ಥೆಗೆ ಯಶ್ವಸಿ ಹಾರೈಸಿದರು. ರೋ. ಸುಮಿತ್ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೋ. ಪ್ರಶಾಂತ್ ರೈ ವಂದಿಸಿದರು.