ಬಿಲ್ಲವ ಸಂಘ ಕುವೈಟ್ ನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಬಿಲ್ಲವ ಚಾವಡಿ 2018ರ ಸಮಾರಂಭವು, ಸೆಪ್ಟೆಂಬರ್ 14, 2018 ನೇ ಶುಕ್ರವಾರದಂದು ಕುವೈಟ್ ಮಂಗಫ್ ನಲ್ಲಿರುವ ಕೇಂಬ್ರಿಡ್ಜ್ ಶಾಲೆಯ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮಕ್ಕಾಗಿ ಊರಿಂದ ಆಗಮಿಸಿದ ತುಳುಭಾಷೆಯ ಮಾಂತ್ರಿಕ ಮೂಡಬಿದ್ರೆಯ ಶ್ರೀ ನಿತೇಶ್ ಪೂಜಾರಿ ಮಾರ್ನಾಡ್, ಶ್ರೀಮತಿ ಅಶ್ವಿತಾ ಸುರೇಂದ್ರರೊಂದಿಗೆ ಕಾರ್ಯಕ್ರಮವನ್ನು ಅತ್ತ್ಯುತ್ತಮವಾಗಿ ನಿರೂಪಿಸಿದ್ದಲ್ಲದೆ ತನ್ನ ತುಳು ಭಾಷೆಯ ಕರ-ಕೌಶಲ್ಯದಿಂದ ಪ್ರೇಕ್ಷಕರನ್ನು ಹುರಿದುಂಬಿಸಿದರು.
ನಾರಾಯಣ ಗುರುಪೂಜೆಯಿಂದ ಪ್ರಾರಂಭವಾದ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ, ಶ್ರೀ ರಾಕೇಶ್ ಶೆಟ್ಟಿ ಬಿ ಸಿ ರೋಡ್ ರಚಿಸಿ ನಟಿಸಿದ ತುಳು ಹಾಸ್ಯಮಯ ನಾಟಕ "ಕೈಕ್ ತಿಕ್ಕುಜೆರ್", ಗಣೇಶ್ ಕೊಡಕ್ಕಲ್ ರವರ ಸುಮಧುರ ಸಂಗೀತದೊಂದಿಗೆ, ಸತೀಶ್ ಆಚಾರ್ಯರವರ ನಿರ್ದೇಶನದಲ್ಲಿ ಹಾಗು ಅತಿಥಿ ಕಲಾವಿದರಾದರಾದ ಶ್ರೀ ಪ್ರವೀಣ್ ಕೋಟ್ಯಾನ್ ಕೊಡಕ್ಕಲ್ ಹಾಗು ಶ್ರೀ ಚಂದ್ರಶೇಖರ್ ಪೂಜಾರಿ ಇವರು ಕುವೈಟ್ ನ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಅಮರ್ ಸುವರ್ಣ ಹಾಗೂ ಅವರ ತಂಡದ ಕಲಾವಿದರೊಂದಿಗೆ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ತುಳುಭಾಷೆಯ ನಿರೂಪಣೆ ಹಾಗು ತುಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಈ ಸಮಾರಂಭವು ಸೇರಿದ ಜನರಲ್ಲಿ ತುಳುನಾಡ ಭೂಮಿಯಲ್ಲಿರುವಂತೆ ಭಾವನೆಯನ್ನು ಮೂಡಿಸಿತಲ್ಲದೆ, ಕುವೈಟ್ ಬಿಲ್ಲವ ಸಂಘದ ಸತತ 3 ನೇ ಯಶಸ್ವಿ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ರಘು ಸಿ. ಪೂಜಾರಿ, ಉಪಾಧ್ಯಕ್ಷರಾದ ಶ್ರೀ ಕೃಷ್ಣ ಸ್. ಪೂಜಾರಿ, ಸಲಹೆಗಾರರಾದ ಶ್ರೀ ರೋಹಿತ್ ಸನಿಲ್ ಹಾಗು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಕುವೈಟ್ ಸಾರಥಿ ಸಂಘದ ಅಧ್ಯಕ್ಷರಾದ ಶ್ರೀ ಸುಗುಣನ್ ಕೊಚುವೀತಿಲ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಅದ್ಭುತವಾಗಿ ಕಾರ್ಯಕ್ರಮ ನಿರೂಪಿಸಿದ ಶ್ರೀ ನಿತೇಶ್ ಪೂಜಾರಿ ಮಾರ್ನಾಡ್ ರವರನ್ನು ಸನ್ಮಾನಿಸಲಾಯ್ತು.