ಮುಂಬಯಿ, ಅ.18: ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಉಡುಪಿ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಕಳೆದ ಸೋಮವಾರ ರಾತ್ರಿ ವಾರ್ಷಿಕ ವಿಶೇಷ ದುರ್ಗಾಪೂಜೆ ನೆರವೇರಿಸಲ್ಪಟ್ಟಿತು. ಮಠದ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ದುರ್ಗಾಪೂಜೆ ನೆರವೇರಿಸಿ ನೆರದ ಭಕ್ತಾಭಿಮಾನಿಗಳಿಗೆ ಅನುಗ್ರಹಿಸಿದರು.
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆಶೀರ್ವಾದ ಹಾಗೂ ಶ್ರೀ ಪೇಜಾವರ ಕಿರಿಯಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನದೊಂದಿಗೆ ದುರ್ಗಾಪೂಜೆ ಜರುಗಿದ್ದು, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್ ಮತ್ತು ಆಶಾ ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಭಾರ್ಗವ ಕಲ್ಲೂರಾಯ, ಕೃಷ್ಣ ಬಾರ್ಯ, ಸುರೇಶ್ ಎಸ್.ರಾವ್ ಕಟೀಲು, ಪೇಜಾವರ ಮಠದ ವ್ಯವಸ್ಥಾಪಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.