ಚಿತ್ರಶೀರ್ಷಿಕೆ: ಸ್ಕೂಟರ್ನಲ್ಲಿ ತೀರ್ಥಯಾತ್ರೆ ಕೈಗೊಂಡ ಮೈಸೂರಿನ ಕೃಷ್ಣಕುಮಾರ್ ಮತ್ತು ತಾಯಿ ಚೂಡಾರತ್ನ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಉಜಿರೆ: ಮೈಸೂರಿನ ಕೆ. ಕೃಷ್ಣಕುಮಾರ್ ತನ್ನ ಹಳೆ ಸ್ಕೂಟರ್ನಲ್ಲಿ 70 ವರ್ಷ ಪ್ರಾಯದ ತಾಯಿ ಚೂಡಾಮಣಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದು ಈಗಾಗಲೆ ಇಪ್ಪತ್ತನಾಲ್ಕು ಸಾವಿರ ಕಿ.ಮೀ. ಕ್ರಮಿಸಿದ್ದು ವಿವಿಧ ಕ್ಷೇತ್ರಗಳ ದರ್ಶನ ಮಾಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹಿನ್ನೆಲೆ: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಕುಮಾರ್ ತಂದೆ ದಕ್ಷಿಣಾಮೂರ್ತಿ ಇತ್ತೀಚೆಗೆ ನಿಧನರಾದರು.
ತೀರ್ಥಕ್ಷೇತ್ರಗಳನ್ನು ನೋಡಬೇಕೆಂದು ತಾಯಿ ಚೂಡಾರತ್ನ ಆಶಯ ವ್ಯಕ್ತಪಡಿಸಿದಾಗ, ಮಗ ಕೃಷ್ಣ ಕುಮಾರ್ ತಾಯಿ ಜೊತೆ ಸ್ಕೂಟರ್ನಲ್ಲಿ ತೀರ್ಥಯಾತ್ರೆ ಪ್ರಾರಂಭಿಸಿದರು.
ತನ್ನನ್ನು ಹೊತ್ತು ಹೆತ್ತು, ಪ್ರೀತಿಯಿಂದ ಪಾಲನೆ ಮಾಡಿದ ತಾಯಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಬೇಕೆಂಬ ಆಸೆ ಇದೆ. ತನ್ನ ಜೀವನದ ಬಹುಭಾಗವನ್ನು ಅಡುಗೆ ಕೋಣೆಯಲ್ಲೇ ಕಳೆದ ತಾಯಿಗೆ ತೀರ್ಥಯಾತ್ರೆ ಮಾಡಿಸುವುದು ತನ್ನ ಕರ್ತವ್ಯ ಎಂದು ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಹಳೆ ಸ್ಕೂಟರ್ನಲ್ಲಿ ತೀರ್ಥಕ್ಷೇತ್ರ ಹೊಸ ಅನುಭವ ನೀಡುತ್ತಿದೆ. ತನಗೆ ಮಗನ ಬಗ್ಯೆ ಹೆಮ್ಮೆ ಇದೆ ಎಂದು ತಾಯಿ ಚೂಡಾರತ್ನ ಅಭಿಮಾನ ವ್ಯಕ್ತಪಡಿಸಿದ್ದಾರೆ.
2018ರ ಜನವರಿ 16 ಮೈಸೂರಿನಿಂದ ತೀರ್ಥಯಾತ್ರೆ ಪ್ರಾರಂಭಿಸಿದ ತಾಯಿ ಮತ್ತು ಮಗ ಈಗಾಗಲೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ತೀರ್ಥಕ್ಷೇತ್ರ ದರ್ಶನ ಮುಗಿಸಿ ಈಗ ಕರ್ನಾಟಕದಲ್ಲಿ ತೀರ್ಥಕ್ಷೇತ್ರ ದರ್ಶನ ಮಾಡುತ್ತಿದ್ದಾರೆ.