ಎ.29: ದುರ್ಗಾ ಸಂಜೀವನೀ ಮಣಿಪಾಲ್ ಹಾಸ್ಪಿಟಲ್ ಕಟೀಲು ಸೇವಾರ್ಪಣೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.24: ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ (ಮುಂಬಯಿ)ನ ಕಾರ್ಯಾಧ್ಯಕ್ಷರಾಗಿದ್ದು, ಮಹಾನಗರ ಮುಂಬಯಿನÀ ಪ್ರತಿಷ್ಠಿತ ತುಳು-ಕನ್ನಡಿಗ ವೈದ್ಯಾಧಿಕಾರಿ, ಅಂಧೇರಿ ಪೂರ್ವದಲ್ಲಿನ ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್ನ ಸದಸ್ಯ, ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರ ಕನಸಿನ ಯೋಜನೆ ಒಂದಾದ ದುರ್ಗಾ ಸಂಜೀವನೀ ಮಣಿಪಾಲ್ ಹಾಸ್ಪಿಟಲ್ ಕಟೀಲು ಇದೇ ಎಪ್ರಿಲ್.29ನೇ ಸೋಮವಾರ ಬೆಳಿಗ್ಗೆ ಆಸ್ಪತ್ರೆ ಆವರಣ ಕಟೀಲು ಇಲ್ಲಿ ಲೋಕಾರ್ಪಣೆ ಗೊಳ್ಳಲಿದ್ದು, ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಸ್ಪತ್ರೆಯನ್ನು ಸೇವಾರ್ಪಣೆಗೈಯುವರು.
Vasudeva Asranna Pejawara Shree Sanatkumar Shetty
Dr. H L Ballal Dr. Ranjan Pai Dr. Ananda Venugopal.
Dr. Suresh Rao
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಅನುವಂಶಿಕೆ ಮೊಕ್ತೇಸರರು, ಅನುವಂಶಿಕ ಅರ್ಚಕ ಶ್ರೀ ವಾಸುದೇವ ಅಸ್ರಣ್ಣ ಕಟೀಲು, ಶ್ರೀ ಕ್ಷೇತ್ರ ಕಟೀಲು ಇದರ ಆಡಳಿತ ಸಮಿತಿ ಅಧ್ಯಕ್ಷ, ಅನುವಂಶಿಕ ಮೊಕ್ತೇಸರ ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಸಹ ಕುಲಾಧಿಪತಿಗಳಾ ದ ಡಾ| ಎಚ್.ಎಲ್ ಬಲ್ಲಾಳ್ ಮತ್ತು ಡಾ| ರಂಜನ್ ಪೈ, ಮಾಹೆ ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಅಂದು ಬೆಳಿಗ್ಗೆ 8.00 ಗಂಟೆಗೆ ನೆರವೇರಲಿರುವ ಪೂಜಾಧಿಗಳಲ್ಲಿ ಪಾಲ್ಗೊಂಡು ಪೂರ್ವಾಹ್ನ 10.20 ಗಂಟೆಗೆ ಪೇಜಾವರಶ್ರೀಗಳು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ರಾತ್ರಿ ಗಂಟೆ 8.30 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಸೇವೆ ನೇರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ನಡೆಯುವ ಅನ್ನಸಂತರ್ಪಣೆಗೆ ತಮ್ಮ ಬಂಧು, ಮಿತ್ರರೊಡಗೂಡಿ ಚಿತ್ತೈಸಿ ಕಟೀಲೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಂಜೀವನೀ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಅಧ್ಯಕ್ಷ ಡಾ| ಸುರೇಶ್ ರಾವ್ ಕಟೀಲು, ಟ್ರಸ್ಟಿಗಳಾದ ಶ್ರೀಮತಿ ವಿಜಯಲಕ್ಷ್ಮೀ ಎಸ್.ರಾವ್, ಲಕ್ಷ್ಮೀಶ ಆಚಾರ್ಯ, ಡಾ| ಶ್ರುತಿ ರಾವ್, ಡಾ| ದೇವಿಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್ ಈ ಮೂಲಕ ವಿನಂತಿಸಿದ್ದಾರೆ.
ಕಟೀಲು ಪರಿಸರ ಮತ್ತುದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ
ಶ್ರೀ ದುರ್ಗಾ ಪರಮೇಶ್ವರಿ ಟೆಂಪಲ್ ಟ್ರಸ್ಟ್ ಹಾಗೂ ಕೆಎಂಸಿ (ಮಾಹೆ) ಇವುಗಳ ಭವ್ಯ ಯೋಜನೆ ಇದಾಗಿದ್ದು, ಸಂಜೀವನಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಡಾ| ಸುರೇಶ್ ಎಸ್.ರಾವ್ ತಾನು ಹುಟ್ಟಿ ಬೆಳೆದ ಕಟೀಲು ಪರಿಸರಕ್ಕೆ ಉನ್ನತವಾದ, ಉತ್ತುಂಗವಾದ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಬೇಕು ಎನ್ನುವ ಮನದ ಇಂಗಿತವನ್ನು ಇರಿಸಿ ತೀರಾ ಗ್ರಾಮೀಣ ಪ್ರದೇಶದ ಪರಿಸರ ಕೃಷಿಕರು, ರೈತಾಪಿ ವರ್ಗದ ಜನತೆ, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆದಾರರು ವಾಸಿಸುವ ಕಟೀಲು ಆಸುಪಾಸಿನ ಹಲವು ಗ್ರಾಮಗಳ ಜನತೆಯ ಆರೋಗ್ಯಭಾಗ್ಯಕ್ಕೆ ವರವಾಗಿಸಿ ಬಹುಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಸುಮಾರು 1.5 ಎಕರೆ ಜಾಗದಲ್ಲಿ 3 ಅಂತಸ್ತಿನ ಕಟ್ಟಡದಲ್ಲಿ 70,000 ಚದರ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಸ್ಥಾನೀಯ ಜನತೆಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಲಿದೆ. 100 ಬೆಡ್ಗಳ ಅತ್ಯಾಧುನಿಕ ಸೌಲಭ್ಯವುಳ್ಳ, ತುರ್ತುನಿಗಾ ಉಪಶಮನದ ವಿಭಾಗ 24x7 ಕಾರ್ಯನಿರ್ವಹಿಸಲಿದೆ. ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ, ಎಲುಬು ಮತ್ತು ಕೀಲು, ಜನರಲ್ ಮೆಡಿಸಿನ್, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು ಮತ್ತು ಮಕ್ಕಳ ವಿಭಾಗ, ತುರ್ತುಚಿಕಿತ್ಸೆ, ಐಸಿಯು, ಮತ್ತು ಶವಾಗಾರ ಸೌಲಭ್ಯವೂ ಒಳಗೊಂಡಿದೆ. ಲ್ಯಾಬ್, ಔಷಧಾಲಯ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ವೈದ್ಯರಿಗೆ ವಸತಿ ನಿಲಯವಿದ್ದು 24x7 ಕಾರ್ಯ ನಿರ್ವಹಿಸಲಿರುವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದಾಗಿದೆ.