(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.18: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕಳೆದ ಬುಧವಾರ ರಾತ್ರಿ ಮುಂಬಯಿಗೆ ಚರಣಸ್ಪರ್ಶಗೈದಿದ್ದು, ಇಂದಿಲ್ಲಿ ಗುರುವಾರ ಬೆಳಿಗ್ಗೆ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಪಟ್ಟದ ದೇವರಾದ ರಾಮ ವಿಠಲ ದೇವರಿಗೆ ಮಹಾಪೂಜೆಗೈದು ಮಠದಲ್ಲಿ ಪ್ರತಿಷ್ಠಾಪಿತ ಶ್ರೀ ಕೃಷ್ಣ ದೇವರಿಗೆ ಪೂಜೆ, ಮಹಾರತಿ ನೆರವೇರಿಸಿ ಪಾವಿತ್ರ್ಯತಾ ತಪ್ತ ಮುದ್ರಾಧಾರಣೆ ನಡೆಸಿ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಅನುಗ್ರಹಿಸಿದರು.
ತಪ್ತವಾದ ಶರೀರದಿಂದ ಮಾಡಿದ ಸತ್ಕರ್ಮ ಸತ್ಫಲವನ್ನು ನೀಡುತ್ತಿದೆ. ಬಂಗಾರದ ಪಟ್ಟಿಹಾರ ಆಗಬೇಕಾದರೆ ಕಾಯಿಸಬೇಕು. ಹಾಗೆಯೇ ಶರೀರ ಶುದ್ಧಿಯಾದರೂ ಮತ್ತೆ ಮತ್ತೆ ಶುದ್ಧಿಯಾಗಬೇಕು ಎನ್ನುವ ವಿಚಾರ ಪ್ರಾಕೃತಿಕ ಆದುದು. ಆದುದರಿಂದ ಮನುಕುಲವು ಕಷ್ಟ ಸಹಿಸುವ ಶಕ್ತಿ ಬೆಳೆಸಬೇಕು. ಆವಾಗ ಜೀವನದ ಉತ್ತಾಂಗವನ್ನು ಮುಟ್ಟಬಹುದು ಎಂದು ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಇದರ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ವಿದ್ವಾನ್ ಎಸ್.ಎನ್ ಉಡುಪ, ಪಡುಬಿದ್ರಿ ವಿ.ರಾಜೇಶ್ ರಾವ್ (ಅದಮಾರು ಮಠ), ಸಾಣೂರು ಸಾಂತಿಂಜ ಜನಾರ್ದನ ಭಟ್, ದಿನೇಶ್ ಉಪರಣ ವಾಶಿ, ಕೆ.ಕೃಷ್ಣಮೂರ್ತಿ ವಾಶಿ, ಶೇಖರ್ ಎಸ್.ಸಾಲ್ಯಾನ್, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರಾದ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಪುರೋಹಿತರನೇಕರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು ಮುದ್ರಾಧಾರಣೆ ಹಚ್ಚಿಸಿ ಕೊಂಡರು. ಭಕ್ತರು ಭಜನೆ ನಡೆಸಿದರು.